ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಜನತಾ ಕಾಲೋನಿಯಲ್ಲಿ ಸುಮಲತಾ ಎಂಬ ಗೃಹಿಣಿ ನೇಣಿಗೆ ಶರಣಾಗಿದ್ದಾರೆ. ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಸುಮಲತಾ ಹಾಗೂ ಶಿವಕುಮಾರ್ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮೂಲತಃ ಆಂಧ್ರದ ಪೆನುಗೊಂಡದವರಾದ ಸುಮಲತಾ, ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಜನತಾ ಕಾಲೋನಿಯ ನಿವಾಸಿ ಶಿವಕುಮಾರ್ ಎಂಬಾತನನ್ನು ಮದುವೆಯಾಗಿದ್ದರು. ಮದುವೆಯಾಗಿ ಕೆಲ ತಿಂಗಳ ಕಾಲ ಸುಖವಾಗಿ ಸಂಸಾರ ಮಾಡಿದ್ದ ಜೋಡಿಗಳ ಮಧ್ಯೆ ಇದ್ದಕ್ಕಿದ್ದಂತೆ ಜಗಳ ಶುರುವಾಗಿದೆ. ಪಾಪಿ ಪತಿ ಶಿವಕುಮಾರ್ ಪ್ರತಿನಿತ್ಯ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಇದಕ್ಕೆ ಅವನ ತಾಯಿ ಸರೋಜಮ್ಮ ಸಾಥ್ ನೀಡಿದ್ದರಂತೆ. ಬೆಂಗಳೂರಿನಲ್ಲಿ ಮನೆ ಲೀಸ್ಗೆ ಹಾಕಿಸಿಕೊಡು, ಹಣ ತೆಗೆದುಕೊಂಡು ಬಾ ಅಂತಾ ಪೀಡಿಸುತ್ತಿದ್ದರು ಎನ್ನಲಾಗಿದೆ.
ಆದರೂ ಸುಮಲತಾ ತಮ್ಮ ಮನೆಯಲ್ಲಿ ತಿಳಿಸದೇ ಬಾಳುತ್ತಿದ್ದರು. ಯಾಕೆಂದರೆ ಸುಮಲತಾ ಮನೆಯಲ್ಲಿ ನಾಲ್ಕು ಜನ ಹೆಣ್ಣು ಮಕ್ಕಳು, ಕಿತ್ತು ತಿನ್ನುವ ಬಡತನ ತಾನು ವಾಪಸ್ ಮನೆಗೆ ಹೋದರೆ ತಂಗಿಯರಿಗೆ ಮದುವೆಯಾಗಲ್ಲ ಎಂಬ ಭಯದಿಂದ ಸುಮ್ಮನಿದ್ದರು. ಜೊತೆಗೆ ಕಳೆದ ಒಂದು ತಿಂಗಳಿನಿಂದ ತವರು ಮನೆಗೆ ಹೋಗುವ ವಿಚಾರವಾಗಿ ಜಗಳವಾಡಿ ಪತಿ ಶಿವಕುಮಾರ್ ಆಕೆಯನ್ನು ಮನೆಯಿಂದ ಆಚೆ ಹಾಕಿದ್ದನಂತೆ. ನಂತರ ಪೊಲೀಸ್ ಠಾಣೆಗೆ ಹೋಗಿ ರಾಜೀ ಸಂಧಾನ ಕೂಡ ಆಗಿ ಬಳಿಕ ಜಗಳ ಮಾಡಲ್ಲ ಎಂದು ಮುಚ್ಚಳಿಕೆ ಪತ್ರ ಬರೆದುಕೊಟ್ಟು ಬಂದಿದ್ದಾರೆ.
ಆದರೆ ತಡರಾತ್ರಿ ಪತಿ ಶಿವಕುಮಾರ್ ಸುಮಲತಾಳನ್ನ ಉಸಿರುಗಟ್ಟಿಸಿ ಕೊಲೆ ಮಾಡಿ ನೇಣಿಗೆ ಹಾಕಿದ್ದಾನೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ಬಳಿಕ ಶಿವಕುಮಾರ್ ತಡರಾತ್ರಿಯೇ ಪೊಲೀಸರಿಗೆ ಶರಣಾಗಿದ್ದು, ಕೊರಟಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಇದು ಕೊಲೆಯೋ, ಆತ್ಮಹತ್ಯೆಯೋ ಅನ್ನೋ ಸತ್ಯ ಬಹಿರಂಗವಾಗಲಿದೆ.