ಮೈಸೂರು: ಮೈಸೂರು ಅರಮನೆ ಆವರಣದಲ್ಲಿನ ಕಂಚಿನ ಸಿಂಹದ ಮೇಲೆ ಪ್ರವಾಸಿಗನೊಬ್ಬ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದಕ್ಕೆ ಪ್ರವಾಸಿಗನ ಮೇಲೆ ರಾಜವಂಶಸ್ಥರು ಗರಂ ಆಗಿದ್ದಾರೆ.
ಕಂಚಿನ ಸಿಂಹದ ಮೇಲೆ ಕುಳಿತು ಪ್ರವಾಸಿಗ ಪ್ರಜ್ವಲ್ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆ. ಪ್ರವಾಸಿಗ ಪ್ರಜ್ವಲ್ನ ಈ ಪೋಸ್ಟ್ ಗೆ ರಾಜವಂಶಸ್ಥ ವರ್ಚಸ್ಸ್ ಸಿದ್ದಲಿಂಗರಾಜೇ ಅರಸ್ ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೋಸ್ಟ್ ನಲ್ಲಿ, ಇಂತಹ ವ್ಯಕ್ತಿಗಳಿಗೆ ಪಾಠ ಕಲಿಸಬೇಕಿದೆ. ಪಾರಂಪರಿಕ ಸ್ಮಾರಕಗಳನ್ನು ಈ ರೀತಿ ಬಳಕೆ ಮಾಡಬಾರದು. ಈ ಬಗ್ಗೆ ಅರಮನೆ ಮಂಡಳಿ ಹಾಗೂ ಪೊಲೀಸರು ಪ್ರವಾಸಿಗನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಪ್ರವಾಸಿಗರಿಗೆ ಜಾಗೃತಿ ಮೂಡಿಸಬೇಕಿದೆ. ಈ ರೀತಿ ದುರ್ಬಳಕೆ ಮಾಡದಂತೆ ಅರಮನೆ ಮಂಡಳಿ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಿ ಎಂದು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಸದ್ಯ ಯುವಕನ ಪೋಸ್ಟ್ ನೋಡಿ ನೆಟ್ಟಿಗರು ಆತನ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.