ಚಿತ್ರದುರ್ಗ: ಟಿಕ್ಟಾಕ್ ವಿಡಿಯೋ ಮಾಡಲು ಯುವಕನೊಬ್ಬ ವಿ.ವಿ ಸಾಗರ ಡ್ಯಾಂ ಮೇಲಿನಿಂದ ಜಿಗಿದು ನೀರಲ್ಲಿ ಈಜಾಡಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದಿದೆ.
ಮೈಸೂರು ಅರಸರ ಕಾಲದಲ್ಲಿ ನಿರ್ಮಾಣವಾದ ವಿ.ವಿ ಪುರ ಗ್ರಾಮದ ಬಳಿ ಇರುವ ವಾಣಿ ವಿಲಾಸ ಸಾಗರ ಜಲಾಶಯ 132 ಅಡಿ ಎತ್ತರವಿದೆ. ಹೊಸ ವರ್ಷದ ದಿನವಾದ ಬುಧವಾರ ಅತಿ ಹೆಚ್ಚು ಪ್ರವಾಸಿಗರು ವಿವಿ ಸಾಗರ ಡ್ಯಾಂಗೆ ಆಗಮಿಸಿದ್ದರು.
ಇಂದು ಬೆಳಗ್ಗೆ ವಿವಿ ಸಾಗರಕ್ಕೆ ಆಗಮಿಸಿದ ಯುವಕನೊಬ್ಬ ಜಲಾಶಯದ ಕಟ್ಟೆ ಮೇಲಿಂದ ಹಾರಿದ್ದಾನೆ. ಈ ದುಸ್ಸಾಹಸ ಕಂಡು ನೆರೆದಿದ್ದ ಪ್ರವಾಸಿಗರು ಬೆರಗಾಗಿದ್ದಾರೆ. ಈ ಯುವಕನ ದುಸ್ಸಾಹಸದಿಂದಾಗಿ ಬಾರಿ ಆತಂಕ ಸೃಷ್ಟಿಯಾಗಿದ್ದು, ಕೆಲಕಾಲ ಪ್ರವಾಸಿಗರ ವೀಕ್ಷಣೆಗೆ ಬ್ರೇಕ್ ಹಾಕಲಾಗಿತ್ತು.
ಅದೃಷ್ಟವಶಾತ್ ಈಜಿ ದಡ ಸೇರಿರುವ ಯುವಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಸದ್ಯ ಈ ಯುವಕನ ದುಸ್ಸಾಹಸದ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ವಿಡಿಯೋದಲ್ಲಿರುವ ಯುವಕ ಯಾರು ಎಂಬುದು ತಿಳಿದು ಬಂದಿಲ್ಲ.