– ಕಿರುಕುಳ ನೀಡುತ್ತಿದ್ದ ಅಳಿಯನಿಂದಲೇ ಕೊಲೆ ಶಂಕೆ
ರಾಯಚೂರು: ನಗರದ ಹೊರವಲಯದ ಯರಮರಸ್ ಕ್ಯಾಂಪ್ನಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಒಂದೇ ಕುಟುಂಬದ ಮೂವರು ಹೆಣ್ಣುಮಕ್ಕಳನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಸಂತೋಷಿ(45), ವೈಷ್ಣವಿ(25), ಆರತಿ(16) ಕೊಲೆಯಾದ ದುರ್ದೈವಿಗಳು. ಈ ಮೂವರನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ನಿನ್ನೆ ರಾತ್ರಿ ಘಟನೆ ನಡೆದಿದ್ದು, ಬೆಳಗ್ಗೆ ಬೆಳಕಿಗೆ ಬಂದಿದೆ. ವೈಷ್ಣವಿ ಪತಿ ಸಾಯಿ ಎಂಬುವವನೇ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಅಕ್ಕಪಕ್ಕದ ಮನೆಯವರು ಆರೋಪಿಸಿದ್ದಾರೆ. ಇದನ್ನೂ ಓದಿ: ಬೇಡ..ಬೇಡ ಎಂದರೂ ಅಮ್ಮ ಮಕ್ಕಳೊಂದಿಗೆ ನದಿಗೆ ಹಾರಿದ್ಳು
ಕಳೆದ 6 ತಿಂಗಳ ಹಿಂದೆಯಷ್ಟೇ ವೈಷ್ಣವಿಗೆ ಮದುವೆ ಆಗಿದ್ದು, ಮದುವೆ ಬಳಿಕ ಆರೋಪಿ ಸಾಯಿ ಹಾಗೂ ವೈಷ್ಣವಿ ಮಧ್ಯೆ ಜಗಳ ಶುರುವಾಗಿದೆ. ಅದು ಅಲ್ಲದೇ ನಿನ್ನೆ ಅತ್ತೆ ಮನೆಗೆ ಬಂದ ಅಳಿಯ ಸಾಯಿ ಜಗಳ ತೆಗೆದು ಗಲಾಟೆ ಮಾಡಿದ್ದ. ಜಗಳ ವಿಕೋಪಕ್ಕೆ ಹೋಗಿ ಅತ್ತೆ, ಪತ್ನಿ ಹಾಗೂ ಪತ್ನಿ ತಂಗಿಯನ್ನು ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಕಾರಲ್ಲೇ ಕೂರಿಸಿ ಯುವಕ, ಯುವತಿಯ ವೀಡಿಯೋ ರೆಕಾರ್ಡ್ – 5 ಲಕ್ಷಕ್ಕೆ ಬೆದರಿಕೆ
ಹೈದರಾಬಾದ್ನಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದ ಸಾಯಿ ಆಗಾಗ ಪತ್ನಿಗೆ ಹಾಗೂ ಅವರ ಮನೆಯವರಿಗೆ ಕಿರುಕುಳ ನೀಡುತ್ತಿದ್ದ. ಮನೆಯವರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ, ಮನೆಯಲ್ಲೇ ಮದ್ಯಪಾನ ಮಾಡುತ್ತಿದ್ದ ಎಂಬ ಆರೋಪಗಳು ಕೇಳಿಬಂದಿವೆ.
ರಾಯಚೂರು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.