ಕಲಬುರಗಿ: ಹೂತ ಶವವನ್ನು ಹೊರ ತೆಗೆದು ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ನಡೆದಿದೆ.
ಪ್ರೇಮಾಬಾಯಿ ಡಗೆ ಎಂಬ 75 ವರ್ಷದ ಅಜ್ಜಿ ಐದು ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಮಕ್ಕಳಿರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕೆಯ ಮೈಮೇಲಿನ ಚಿನ್ನದ ಒಡವೆ ಸಮೇತ ಅಂತ್ಯಕ್ರಿಯೆ ನೆರವೇರಿಸಿದ್ದರು.
ಈ ಮಾಹಿತಿ ತಿಳಿದ ಪರಿಚಿತ ವ್ಯಕ್ತಿಯಿಂದಲೇ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ಕಳೆದ ರಾತ್ರಿ ಸಮಾಧಿಯಿಂದ ಶವ ಹೊರ ತೆಗೆದು ಶವದ ಮೈಮೇಲಿನ 50ಗ್ರಾಂ ಗೂ ಹೆಚ್ಚು ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಖದೀಮರು ಚಿನ್ನಾಭರಣ ದೋಚಿ ಶವ ಹೊರಗೆ ಬಿಟ್ಟು ಪರಾರಿಯಾಗಿದ್ದಾರೆ.
ಮಂಗಳವಾರ ಬೆಳಗ್ಗೆ ಸಮಾಧಿ ಮೇಲೆ ಬಿದ್ದಿರುವ ಶವ ಕಂಡು ಕುಟುಂಬಸ್ಥರು ಕಂಗಾಲಾಗಿದ್ದು, ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.