ರಾಂಚಿ: ಬೀದಿ ನಾಟಕ ಪ್ರದರ್ಶನ ನೀಡುತ್ತಿದ್ದ ವೇಳೆ ಐವರು ಸರ್ಕಾರೇತರ ಸಂಸ್ಥೆಯೊಂದರ ಮಹಿಳಾ ಸದಸ್ಯರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದ ಕಾಮುಕರು ಅವರಿಗೆ ಬಲವಂತವಾಗಿ ಮೂತ್ರ ಕುಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜಾರ್ಖಂಡ್ ನ ಖುಂಠಿ ಜಿಲ್ಲೆಯ ಶಾಲೆಯೊಂದರಲ್ಲಿ ಬೀದಿ ನಾಟಕ ಪ್ರದರ್ಶನ ನೀಡುತ್ತಿದ್ದ ವೇಳೆ 20 ರಿಂದ 35 ವರ್ಷದ ಐವರು ಮಹಿಳೆಯರನ್ನು ಅಪಹರಿಸಿ ಅವರ ಮೆಲೆ ಸಾಮೂಹಿಕ ಅತ್ಯಾಚಾರವನ್ನು ನಡೆಸಿದ್ದ ಆರು ದುಷ್ಕರ್ಮಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಈ 6 ಜನರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಕಾಮತೃಪ್ತಿಗಾಗಿ ನಡೆಸಿದ ಕೃತ್ಯವಲ್ಲ. ಸರ್ಕಾರ ವಿರೋಧಿ ಸ್ವಯಂ ಆಡಳಿತ ಚಳುವಳಿಯಾಗಿರುವ `ಪಥಾಲಗಡಿ’ ಗುಂಪಿನವರ ಕೃತ್ಯವಾಗಿದೆ. ಇವರ ವಿರುದ್ಧ ಜನಜಾಗೃತಿ ಮೂಡಿಸಲು ಸ್ಥಳೀಯ ಅಧಿಕಾರಿಗಳು ಇಂತಹ ಬೀದಿ ನಾಟಕ ಗುಂಪುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಅವರಿಗೆ ಪಾಠ ಕಲಿಸಲು ಪಥಾಲಗಡಿ ಚಳುವಳಿಯ ಬೆಂಬಲಿಗರು ನಡೆಸಿರುವ ಕೃತ್ಯವಾಗಿದೆ ಎಂದು ಪೊಲೀಸ್ ಅಧಿಕಾರಿ ಮಲಿಕ್ ಹೇಳಿದ್ದಾರೆ.
ಈ ಪ್ರಕರಣದ ಸಂಬಂಧ ಆರೋಪಿಗಳ ಜೊತೆ ಸಂಪರ್ಕ ಹೊಂದಿದ್ದ ಕಾರಣಕ್ಕೆ ಶಾಲೆಯ ಮುಖ್ಯಸ್ಥ ಕ್ರೈಸ್ತ ಪಾದ್ರಿ ಅಲ್ಫೊನ್ಸೊನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಇಬ್ಬರು ಆರೋಪಿಗಳು ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಸರ್ಕಾರವನ್ನು ವಿರೋಧಿಸಿ ಸ್ವಯಂ ಆಡಳಿತ ಚಳುವಳಿಗಾರರ ‘ಪಥಾಲಗಡಿ’ ಗುಂಪು ಈಗಲೂ ಜಾರ್ಖಂಡ್ ನ ಆದಿವಾಸಿ ಪ್ರದೇಶಗಳಲ್ಲಿ ಸ್ಥಳೀಯ ಆಡಳಿತವನ್ನು ನಡೆಸುತ್ತಿವೆ. ಇವು ಸರಕಾರವನ್ನು ವಿರೋಧಿಸಿ ಸ್ವಯಂ ಅಧಿಕಾರವನ್ನು ನಡೆಸುತ್ತವೆ. ಆದರೆ ಎನ್ ಜಿಓ ಕಾರ್ಯಕರ್ತೆಯರು ಬೀದಿ ನಾಟಕಗಳ ಮೂಲಕ ಜನರಲ್ಲಿ ಈ ಪಥಾಲಗಡಿ ಗುಂಪಿನ ವಿರುದ್ಧ ಜನಜಾಗ್ರತಿ ಅಭಿಯಾನ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪಥಾಲಗಡಿ ಗುಂಪಿನ ಕೆಲ ದುಷ್ಕರ್ಮಿಗಳು ಶಸ್ತ್ರಾಸ್ರಗಳೊಂದಿಗೆ ಬಂದು ಐವರು ಮಹಿಳೆಯರನ್ನು ಅಪಹರಿಸಿದ್ದರು. ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಮೂರು ಗಂಟೆಗಳ ನಂತರ ಬಿಡುಗಡೆ ಮಾಡಿದ್ದರು.