ಓರ್ವ ನಿರ್ಮಾಪಕ ಮತ್ತು ಯಾವುದೇ ಸ್ಟಾರ್ ನಟನನ್ನು ಭೇಟಿಯಾದರೂ ತಕ್ಷಣವೇ ಹೊಸ ಸಿನಿಮಾ ಶುರುವಾಗಲಿದೆಯಾ ಎಂಬ ಪ್ರಶ್ನೆ ಮೊಳೆತುಬಿಡುತ್ತೆ. ಹಾಗಿರುವಾಗ ಕನ್ನಡ ಚಿತ್ರರರಂಗದ ಸ್ಟಾರ್ ನಿರ್ದೇಶಕರಾಗಿ ಗುರುತಿಸಿಕೊಂಡಿರೋ ಸಿ.ಆರ್.ಮನೋಹರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಭೇಟಿಯಾದರೆ ಅದೇ ಧಾಟಿಯ ಆಲೋಚನೆ ಬರೋದರಲ್ಲಿ ಯಾವ ಅಚ್ಚರಿಯೂ ಇಲ್ಲ.
ಸಿ.ಆರ್. ಮನೋಹರ್ ರಾಜರಾಜೇಶ್ವರಿ ನಗರದಲ್ಲಿರೋ ಮನೆಗೆ ಭೇಟಿ ನೀಡಿ ದರ್ಶನ್ ಅವರ ಜೊತೆ ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಈ ಭೇಟಿಯ ಫೋಟೋಗಳನ್ನು ಮನೋಹರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡುತ್ತಿದ್ದಂತೆಯೇ ಇದು ಹೊಸ ಸಿನಿಮಾ ಸಂಬಂಧಿತ ಮಾತುಕತೆ ಎಂಬರ್ಥದಲ್ಲಿ ಚರ್ಚೆಯೂ ಶುರುವಾಗಿದೆ. ಆದರೆ ಈ ಬಗ್ಗೆ ಮನೋಹರ್ ಅವರೇ ಸ್ಪಷ್ಟೀಕರಣ ನೀಡಿದ್ದಾರೆ.
ಅವರು ಸಾಕಷ್ಟು ದಿನಗಳಿಂದಲೂ ದರ್ಶನ್ ಅವರನ್ನು ಭೇಟಿ ಮಾಡಬೇಕೆಂಬ ಇರಾದೆ ಹೊಂದಿದ್ದರಂತೆ. ಆದರೆ ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ಈ ಭೇಟಿಯ ಸಂದರ್ಭದಲ್ಲಿ ಯಾವುದೇ ಸಿನಿಮಾದ ಮಾತುಕತೆಯೂ ನಡೆದಿಲ್ಲ. ಇದೊಂದು ಔಪಚಾರಿಕ ಭೇಟಿಯಷ್ಟೇ ಅಂತ ಮನೋಹರ್ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಈಗ ದರ್ಶನ್ ಸಾಲು ಸಾಲಾಗಿ ಮೂರ್ನಾಲಕ್ಕು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಮನೋಹರ್ ಕೂಡಾ ಹೊಸ ಸಿನಿಮಾ ಶುರು ಮಾಡಿದ್ದಾರೆ. ಆದ್ದರಿಂದ ಇವರಿಬ್ಬರ ಕಾಂಬಿನೇಷನ್ನಿನ ಚಿತ್ರ ಸದ್ಯಕ್ಕೆ ಶುರುವಾಗೋ ಲಕ್ಷಣಗಳಿಲ್ಲ.
ಆದರೆ ಈ ಭೇಟಿಯೇ ಮನೋಹರ್ ನಿರ್ಮಾಣದಲ್ಲಿ ದರ್ಶನ್ ಅವರದ್ದೊಂದು ಸಿನಿಮಾ ಮೂಡಿ ಬರುವ ಮುನ್ಸೂಚನೆ ಎಂಬುದನ್ನು ಮಾತ್ರ ತಳ್ಳಿ ಹಾಕುವಂತಿಲ್ಲ. ಮನೋಹರ್ ಈಗಾಗಲೇ ದೊಡ್ಡ ಬಜೆಟ್ಟಿನ ಚಿತ್ರಗಳ ಮೂಲಕ ಸದ್ದು ಮಾಡಿರುವ ನಿರ್ಮಾಪಕರು. ರೋಗ್, ವಜ್ರಕಾಯ, ಶಿವಂ, ದಿ ವಿಲನ್ ಮುಂತಾದ ಬಿಗ್ ಬಜೆಟ್ ಚಿತ್ರಗಳ ನಿರ್ಮಾಪಕರಾದ ಮನೋಹರ್ ಅವರಿಗೆ ದರ್ಶನ್ ಚಿತ್ರ ನಿರ್ಮಾಣ ಮಾಡೋ ಆಸೆಯಂತೂ ಇದೆಯಂತೆ.