ಚಿತ್ರದುರ್ಗ: ಸಮುದಾಯದ ವಿಚಾರದಲ್ಲಿ ಏಕಪಕ್ಷೀಯ ತೀರ್ಮಾನ ಸರಿಯಲ್ಲವೆಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ವಿರುದ್ಧ ಬೋವಿ ಗುರುಪೀಠದ ಸಿದ್ದರಾಮೇಶ್ವರ ಸ್ವಾಮೀಜಿ ಗುಡುಗಿದ್ದಾರೆ.
ನೂತನ ಕೇಂದ್ರಸಚಿವರಾದ ಬೆನ್ನಲ್ಲೇ ನಾರಾಯಣಸ್ವಾಮಿ ಅವರಿಗೆ ಸದಾಶಿವ ವರದಿಯ ಒಳಮೀಸಲಾತಿ ವಿಚಾರ ಬಾರಿ ತಲೆನೋವಾಗಿ ಪರಿಣಮಿಸಿದೆ. ಸ್ವಜಾತಿ ಪ್ರೇಮದ ಭರಾಟೆಯಲ್ಲಿ ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡುವಾಗ ಸದಾಶಿವ ವರದಿ ಜಾರಿ ವಿಚಾರವಾಗಿ ಬೋವಿ ಸ್ವಾಮೀಜಿ ಜೊತೆ ಚರ್ಚಸಿರುವುದಾಗಿ ಹೇಳಿಕೆ ನೀಡಿದ್ದ ಸಚಿವರ ವಿರುದ್ಧ ಬೋವಿ ಗುರುಪೀಠದ ಸಿದ್ದರಾಮೇಶ್ವರ ಸ್ವಾಮೀಜಿ ಕಿಡಿ ಕಾರಿದ್ದಾರೆ. ನಾರಾಯಣಸ್ವಾಮಿ ನಮ್ಮೊಂದಿಗೆ ಒಳಮೀಸಲಾತಿ ವಿಚಾರವಾಗಿ ಯಾವುದೇ ಚರ್ಚೆಯನ್ನು ಮಾಡಿಲ್ಲ. ಅನಾವಶ್ಯಕವಾಗಿ ಗೊಂದಲ ಸೃಷ್ಠಿಸಬಾರದು. ಅವರು ನಿನ್ನೆ ನೀಡಿರುವ ಹೇಳಿಕೆಯಲ್ಲಿ ಸ್ಪಷ್ಟನೆ ಇಲ್ಲ. ಅಲ್ಲದೆ ಈಗಾಗಲೇ ಸೋರಿಕೆಯಾಗಿರುವ ವರದಿಯನ್ನು ಸರ್ಕಾರ ಗೌಪ್ಯವಾಗಿಡದೇ 101 ಜಾತಿಗಳ ಕೈಗೆ ಸಾರ್ವಜನಿಕವಾಗಿ ನೀಡಲಿ. ಅದರಲ್ಲಿರುವ ಸತ್ಯಾಂಶವನ್ನು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದ್ದಾರೆ.
ಒಳಮೀಸಲಾತಿ ವಿಚಾರದಲ್ಲಿ ಎರಡು ಸಮುದಾಯಗಳ ನಡುವೇ ರಾಜಕೀಯ ಸಮರ ನಡೆಯುವುದು ಬೇಡವೆನ್ನುವ ಉದ್ದೇಶದಿಂದ ಎಲ್ಲರು ಒಟ್ಟಾಗಿ ಚರ್ಚಿಸಿ, ಈ ಗೊಂದಲಕ್ಕೊಂದು ತಾರ್ಕಿಕ ಅಂತ್ಯ ಆಡೋಣವೆಂದು ಮುನಿಯಪ್ಪ, ಗೋವಿಂದ ಕಾರಜೋಳ ಹಾಗೂ ನಾರಾಯಣಸ್ವಾಮಿ ಅವರಿಗೆ ನಾವೇ ಸಲಹೆ ನೀಡಿದ್ದೆವು. ಆದರೆ ನಾರಾಯಣಸ್ವಾಮಿ ಅವರು ಈ ರೀತಿ ನಮ್ಮೊಂದಿಗೆ ಹಾಗೂ ನಮ್ಮ ಸಮುದಾಯದ ಶಾಸಕರೊಂದಿಗೆ ಚರ್ಚಿಸಿದ್ದೇನೆಂದು ಹೇಳಿರುವುದು ಸರಿಯಲ್ಲ. ಆ ಬಗ್ಗೆ ಚರ್ಚಿಸೋಣ ಎಂದು ಹೇಳಿದ್ದರಷ್ಟೇ ಆದರೆ ಯಾವುದೇ ಚರ್ಚೆ ಬೈಠಕ್ ಆಗಿಲ್ಲ. ಹೀಗಾಗಿ ಈ ಬಗ್ಗೆ ಚರ್ಚಿಸಲು ಒಂದೇ ವೇದಿಕೆಗೆ ನಮ್ಮೊಂದಿಗೆ ಸಚಿವರು ಧಾವಿಸಲಿ ಎಂದು ಆಹ್ವಾನಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವ ನಾರಾಯಣಸ್ವಾಮಿ ಕಾರ್ಯಕ್ರಮಲ್ಲಿ ಮೂವರ ಜೇಬಿಗೆ ಕತ್ತರಿ, 20 ಸಾವಿರ ಕಳ್ಳತನ
ಸಮುದಾಯವನ್ನು ಸ್ವಾಮೀಜಿ ದಿಕ್ಕುತಪ್ಪಿಸಬಾರದು- ನಾರಾಯಣಸ್ವಾಮಿ
ಶ್ರೀಗಳ ಹೇಳಿಕೆಗೆ ತಿರುಗೇಟು ನೀಡಿರುವ ನಾರಾಯಣಸ್ವಾಮಿ, ಸಮುದಾಯವನ್ನು ಸ್ವಾಮೀಜಿ ದಿಕ್ಕು ತಪ್ಪಿಸಬಾರದು ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ರಾಜಕೀಯಕ್ಕೆ ಬಂದಾಗಿಂದ ನಾನು ತಪ್ಪು ಮಾಡಿಲ್ಲ. ಸದಾಶಿವ ಆಯೋಗದ ವರದಿ ವಿಚಾರದಲ್ಲಿ ಮಿಸ್ ಗೈಡ್ ಸಹ ಮಾಡಿಲ್ಲ. ಸದಾಶಿವ ಆಯೋಗದಲ್ಲಿ ಲಂಬಾಣಿ, ಬೋವಿ ಸಮಾಜಗಳನ್ನು ಕೈಬಿಡಬೇಕು ಎಂಬ ಯಾವುದೇ ಪದವಿಲ್ಲ. ಆದರೂ ಅಲ್ಲಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂಬುದು ನನಗೂ ನಿನ್ನೆ ಅನುಭವವಾಗಿದೆ. ನಾನು ಆ ಸಮಾಜವನ್ನು ವಿರೋಧ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ನಾನ್ಯಾಕೆ ವಿರೋಧ ಮಾಡಲಿ, ನಾನೇನು ಜಸ್ಟಿಸ್ಸಾ? ನಾನೊಬ್ಬ ಕ್ಯಾಬಿನೆಟ್ ಮಂತ್ರಿಯಾಗಿ ಯಾವುದೇ ವರದಿ ತೆಗೆದುಕೊಳ್ಳುವುದು ನನ್ನ ಜವಾಬ್ದಾರಿಯಾಗಿತ್ತು. ಹೀಗಾಗಿ ಅಂದು ಸಮಾಜ ಕಲ್ಯಾಣ ಮಂತ್ರಿ ಆಗಿದ್ದಾಗ ವರದಿ ಸ್ವೀಕರಿಸಿದ್ದೆನೆ. ನಮ್ಮಲ್ಲಿ ಯಾವುದೇ ಕಾಲಘಟ್ಟದಲ್ಲಿ ಸ್ವತಃ ನಾನೇ ಬೋವಿ ಸಮಾಜ ಹಾಗೂ ಲಂಬಾಣಿ ಶಾಸಕರ ಜೊತೆ ಚರ್ಚಿಸಿದ್ದೇನೆ. ಕಡಿಮೆ ಮಾಡಿಕೊಳ್ಳಲು ನಾವು ಸಿದ್ದರಿದ್ದೇವೆ. ಆದ್ದರಿಂದ ಎಲ್ಲರೂ ಒಂದಾಗೋಣ ಎಂದು ಹೇಳಿದ್ದೇನೆ.
ಇಡೀ ಸಮಾಜವನ್ನು ಒಟ್ಟಾಗಿ ತೆಗೆದುಕೊಂಡು ಹೋಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಒಳ್ಳೆಯದು ಮಾಡಬೇಕೆಂಬ ಉದ್ದೇಶ ನನ್ನಲ್ಲಿದೆ. ನಾವ್ಯಾಕೆ ಗುಂಪುಗಾರಿಕೆಮಾಡಲಿ, ನಮ್ಮಲ್ಲಿ ಯಾಕೆ ಈ ಮನಸ್ಥಿತಿ ಬರುತ್ತದೆ? ಈ ವಿಚಾರವಾಗಿ ನಾನೇ ನೇರವಾಗಿ ಸ್ವಾಮೀಜಿ ಜೊತೆ ಮಾತನಾಡಿದ್ದೇನೆ, ಸುಮ್ಮನೆ ಯಾಕೆ ಚರ್ಚೆ ಮಾಡುತ್ತೀರಿ ಸ್ವಾಮೀಜಿಗಳ ಮೇಲೆ ನನಗೆ ಗೌರವ ಇದೆ. ಆದರೆ ನಾನು ಶ್ರೀಗಳ ಜೊತೆ ಮಾತನಾಡಿಲ್ಲ ಎಂದರೆ ಏನರ್ಥ? ಈ ಸ್ವಾಮೀಜಿಯವರು ಬೋವಿ ಗುರುಪೀಠದ ಸ್ವಾಮೀಜಿಗಳಾಗಿ ದಿಕ್ಕು ತಪ್ಪಿಸಬಾರದು. ಇದನ್ನೂ ಓದಿ: ಡಬಲ್ ಮರ್ಡರ್ಗೆ ಬೆಚ್ಚಿಬಿತ್ತು ಮೆಟ್ರೋ ಸಿಟಿ – ಲಕ್ಷ್ಮಿ ಹಬ್ಬದ ದಿನವೇ ಹೆಣವಾದ್ರು ವೃದ್ಧ ದಂಪತಿ
ಸದಾಶಿವ ಆಯೋಗದಲ್ಲಿ ಈ ಎರಡು ಸಮಾಜಗಳನ್ನು ಮೀಸಲಾತಿಯಿಂದ ಕೈ ಬಿಡುವ ಚರ್ಚೆಗಳು ಹಿಂದೆಯೇ ನಡೆದಿದ್ದವು. ನಾನು ಅನೇಕ ಸಭೆಗಳಲ್ಲಿ ಹೇಳಿದ್ದೇನೆ. ಈ ಎರಡು ಸಮಾಜಗಳನ್ನು ಆಯೋಗದಿಂದ ತೆಗೆಯುವುದು ಯಾರ ಮನಸ್ಸಿನಲ್ಲಿ ಇಲ್ಲ. ನೀವ್ಯಾಕೆ ಈ ಕುರಿತು ಚರ್ಚೆ ಮಾಡುತ್ತೀರಾ? ಯಾಕೆ ಗೊಂದಲ ಸೃಷ್ಠಿ ಮಾಡುತ್ತೀರ ಎಂದು ಸ್ವಾಮೀಜಿಯನ್ನು ನಾರಾಯಣ ಸ್ವಾಮಿ ಪ್ರಶ್ನಿಸಿದ್ದಾರೆ.