ಬೆಳಗಾವಿ: ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ 80 ವರ್ಷದ ವೃದ್ಧೆಯನ್ನು ಬೆಳಗಾವಿ ಉಪನೋಂದಣಾಧಿಕಾರಿಗಳು ಸಬ್ ರಿಜಿಸ್ಟರ್ ಕಚೇರಿಗೆ ಕರೆಯಿಸಿಕೊಂಡ ಸಹಿ ಮಾಡಿಸಿಕೊಂಡಿರುವ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ.
ಬೆಳಗಾವಿ (Belagavi) ನಗರದ ನಿವಾಸಿ ಮಹಾದೇವಿ ಅಗಸಿಮನಿ (80) ವೃದ್ಧೆಯೊಬ್ಬರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಇದರಿಂದಾಗಿ ಆಸ್ಪತ್ರೆ (Hospital) ಐಸಿಯುನಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ಸ್ವಲ್ಪವೂ ಮಾನವೀಯತೆ ತೋರದೇ ಸಹಿ ಮಾಡಲು ಅಧಿಕಾರಿಗಳು ಸಬ್ ರಿಜಿಸ್ಟರ್ ಕಚೇರಿಗೆ ಕರೆಸಿಕೊಂಡಿದ್ದಾರೆ. ಅಧಿಕಾರಿಗಳ ಸೂಚನೆ ಮೇರೆಗೆ ಕುಟುಂಬಸ್ಥರು ಸ್ಟ್ರೆಚರ್ ಮೇಲೆಯೇ ವೃದ್ಧೆಯನ್ನು ಉಪನೋಂದಣಾಧಿಕಾರಿ ಕಚೇರಿಗೆ ಕರೆತಂದಿದ್ದಾರೆ.
ಮೂಲಗಳ ಪ್ರಕಾರ, ಆಸ್ತಿ ಹಂಚಿಕೆ ಸಂಬಂಧ ಆಸ್ತಿ ಹಕ್ಕು ಪತ್ರಕ್ಕೆ ಸಹಿ ಹಾಕುವ ವಿಚಾರಕ್ಕೆ ಮಹಾದೇವಿ ಅಗಸಿಮನಿಯ ಹೆಬ್ಬಟ್ಟು ಒತ್ತಿ ಸಹಿ ಮಾಡಿ ಬೆಳಗಾವಿಯ ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕಿತ್ತು. ಆದರೆ, ಮಹಾದೇವಿ ಅನಾರೋಗ್ಯದಿಂದ ಐಸಿಯುನಲ್ಲಿದ್ದ ಕಾರಣ ಉಪನೋಂದಣಿ ಅಧಿಕಾರಿಗೆ ಆಸ್ಪತ್ರೆಗೆ ಬರಲು ಕುಟುಂಬಸ್ಥರು ಮನವಿ ಮಾಡಿದ್ದರು. ಇದನ್ನೂ ಓದಿ: ಮತ್ತೆ ಸಿಪಿವೈ Vs ಎಚ್ಡಿಕೆ – ಕಲ್ಲು, ಮೊಟ್ಟೆ ಎಸೆತ, ಲಾಠಿ ಚಾರ್ಜ್, ಜೆಡಿಎಸ್ ಕಾರ್ಯಕರ್ತರು ವಶಕ್ಕೆ
ಆದರೆ, ಆಸ್ಪತ್ರೆಗೆ ಬಂದು ವೃದ್ಧೆಯ ಹೆಬ್ಬೆಟ್ಟು ಒತ್ತಿಸಿ ಸಹಿ ಮಾಡಿಸಿಕೊಳ್ಳಲು ಉಪನೋಂದಣಾಧಿಕಾರಿ ಪದ್ಮನಾಭ್ ಗುಡಿ ಎರಡು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಆದರೆ ಹಣ ನೀಡಲು ಒಪ್ಪದ ಕುಟುಂಬಸ್ಥರು ವೃದ್ಧೆಯನ್ನು ಆಸ್ಪತ್ರೆಯ ಬೆಡ್ ಮೇಲೆಯೇ ಕಚೇರಿಗೆ ಕರೆತಂದಿದ್ದಾರೆ. ಸ್ಟ್ರೆಚರ್ ಮೇಲೆ ಕಚೇರಿಗೆ ಬಂದು ವೃದ್ಧೆ ಸಹಿ ಮಾಡುವ ವಿಡಿಯೋ ವೈರಲ್ ಆಗಿದ್ದು, ಉಪನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಲು ವೃದ್ಧೆಯ ಕುಟುಂಬಸ್ಥರು ನಿರಾಕರಿಸಿದರು. ಇದನ್ನೂ ಓದಿ: ದೇಶದಲ್ಲಿ 5G ಸೇವೆಗೆ ಚಾಲನೆ – ಯಾವ ನಗರಗಳಲ್ಲಿ ಆರಂಭದಲ್ಲಿ ಸಿಗುತ್ತೆ? ಎಷ್ಟು ಸ್ಪೀಡ್ ಇರುತ್ತೆ?