ಹುಬ್ಬಳ್ಳಿ: ನನಗೆ ಬಿಜೆಪಿಯವರು ತಮ್ಮ ಪಕ್ಷಕ್ಕೆ ಸೇರುವಂತೆ ಕೇಳಿಕೊಂಡಿದ್ದು ನಿಜ. ಅವರು ನೀಡಲು ಮುಂದಾದ ಎಲ್ಲ ಭರವಸೆಗಳನ್ನು ನಾನು ತಳ್ಳಿ ಹಾಕಿದ್ದೇನೆ ಎಂದು ಕಾಂಗ್ರೆಸ್ ಶಾಸಕ ಸಿ.ಎಸ್ ಶಿವಳ್ಳಿ ಹೇಳಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕರು, ಬಿಜೆಪಿಯವರು ಯಾವ ಭರವಸೆ ನೀಡಿದ್ದರು ಎನ್ನುವುದನ್ನು ನಾನು ಹೇಳುವುದಿಲ್ಲ. ನನಗೆ ರಾಜಕೀಯ ಜೀವನ ಕೊಟ್ಟಿದ್ದು ಕಾಂಗ್ರೆಸ್. ಹೀಗಾಗಿ ಪಕ್ಷವನ್ನು ಬಿಟ್ಟು ಹೋಗುವ ವಿಚಾರವನ್ನು ಎಂದಿಗೂ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ನಾನು ಹಿಂದುಳಿದ ವರ್ಗದ ಹಿರಿಯ ಕಾಂಗ್ರೆಸ್ ಶಾಸಕನಾಗಿದ್ದು, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವೆ. ಈ ಕುರಿತು ಪಕ್ಷದ ನಾಯಕರಿಗೆ ಹಾಗೂ ಹೈಕಮಾಂಡ್ಗೆ ಒತ್ತಡ ಹೇರಿದ್ದು ನಿಜ. ಸಚಿವ ಸ್ಥಾನ ನೀಡಲಿಲ್ಲವೆಂದು ಪಕ್ಷ ಬಿಟ್ಟು ಹೋಗುವ ನಿರ್ಧಾರ ಕೈಗೊಂಡಿಲ್ಲ. ವಯಸ್ಸಿದೆ, ಅವಕಾಶಗಳಿವೆ ಮುಂದಿನ ಅವಧಿಯಲ್ಲಿ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಭರವಸೆ ಇದೆ ಎಂದು ಶಾಸಕರು ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಒಂದು ವೇಳೆ ಸರ್ಕಾರ ಬೀಳಿಸಬೇಕು ಅಂದರೆ 14 ಜನ ಶಾಸಕರು ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಿ, ಜಯಗಳಿಸಿ ಬರುವುದು ಅಸಾಧ್ಯ. ಹೀಗಾಗಿ ಯಾರೊಬ್ಬರೂ ರಾಜೀನಾಮೆ ನೀಡಿ ಬಿಜೆಪಿ ಸೇರಲು ಮುಂದಾಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv