ಹಾಸನ: ಎರಡು ದೇವಾಲಯಗಳ (Temple) ಬೀಗ ಮುರಿದು ದೇವರ ವಿಗ್ರಹದ ಮೇಲಿದ್ದ ಸುಮಾರು 12 ಲಕ್ಷ ರೂ. ಮೌಲ್ಯದ ಬೆಳ್ಳಿ ಮತ್ತು ಸುಮಾರು 2.25 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಕಳ್ಳತನ ಮಾಡಿದ ಘಟನೆ ಅರಸೀಕೆರೆಯ (Arasikere) ಚಿಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶ್ರೀ ಶಂಕರೇಶ್ವರಸ್ವಾಮಿ ದೇವಸ್ಥಾನ ಹಾಗೂ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಈ ಕಳ್ಳತನ ನಡೆದಿದೆ. ಶಂಕರೇಶ್ವರಸ್ವಾಮಿ ದೇವಸ್ಥಾನದಲ್ಲಿ ಸಿದ್ದಲಿಂಗಮೂರ್ತಿ ಎಂಬವರು ಗುಡಿಗೌಡರಾಗಿ ಸುಮಾರು ಐದು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದಾರೆ. ಗ್ರಾಮದ ದೊಡ್ಡಮಂಜಪ್ಪ ದೇವಸ್ಥಾನದ ಪೂಜೆ ಮಾಡುತ್ತಿದ್ದಾರೆ. ಆ.31 ರ ರಾತ್ರಿ 11:50 ರವರೆಗೆ ದೇವರ ಪೂಜೆ ಸಲ್ಲಿಸಿ ದೇವಾಲಯದ ಬಾಗಿಲಿಗೆ ಬೀಗ ಹಾಕಿಕೊಂಡು ತೆರಳಿದ್ದರು. ಮಾರನೇ ದಿನ ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಪೂಜಾರಿಯವರು ಬಂದು ನೋಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ಭಕ್ತಾದಿಗಳು ನೀಡಿದ್ದ ಬೆಳ್ಳಿಯ 40 ಚತ್ರಿಗಳು, 1 ಬೆಳ್ಳಿಯ ಹಣೆ ಪಟ್ಟಿ, 3 ಬೆಳ್ಳಿಯ ನಾಗಾಭರಣ, 3 ಬೆಳ್ಳಿಯ ಲಿಂಗದ ಕಾಯಿ, 2 ಬೆಳ್ಳಿಯ ನರಿಗೆ, 2 ಬೆಳ್ಳಿಯ ಗಿಳಿ, 2 ಬೆಳ್ಳಿಯ ನಿಂಬೆಹಣ್ಣು, 2 ಬೆಳ್ಳಿಯ ಕೋಡಣಸು, 1 ಬೆಳ್ಳಿಯ ಮುಖವಾಡ ಸೇರಿ ಸುಮಾರು 12,00,000 ರೂ ಬೆಲೆ ಬಾಳುವ ಒಟ್ಟು 12 ಕೆಜಿ ಬೆಳ್ಳಿ ಹಾಗೂ ಪಾರ್ವತಿ ಮೇಲಿದ್ದ 1 ಚಿನ್ನದ ಮಾಂಗಲ್ಯ. 2 ಕಾಸು ಹಾಗೂ 10 ಗ್ರಾಂ ಚಿನ್ನದ ಗುಂಡು ಸೇರಿ ಅಂದಾಜು 2,00,000 ರೂ. ಮೌಲ್ಯದ ಒಟ್ಟು 35 ಗ್ರಾಂ ಚಿನ್ನದ ಆಭರಣ ಮತ್ತು ಹುಂಡಿಯನ್ನು ಕಳ್ಳತನ ಮಾಡಲಾಗಿದೆ.
ದೇವಸ್ಥಾನದ ಪೂರ್ವ ದಿಕ್ಕಿನಲ್ಲಿರುವ ಶ್ರೀಚೌಡಮ್ಮ ದೇವಸ್ಥಾನದಲ್ಲಿ ಸಹ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಬೀಗವನ್ನು ಒಡೆದು ಚೌಡೇಶ್ವರಿದೇವರ ಮೂರ್ತಿಗೆ ಭಕ್ತಾಧಿಗಳು ಕೊಟ್ಟಿದ್ದ 1 ಚಿನ್ನದ ಮಾಂಗಲ್ಯ ಸರ, 2 ಚಿನ್ನದ ಕಾಸು, 2 ಚಿನ್ನದ ಗುಂಡುಗಳು ಸೇರಿ ಅಂದಾಜು 25000 ಮೌಲ್ಯದ 5 ಗ್ರಾಂ ಚಿನ್ನಾಭರಣ ಹಾಗೂ ದೇವಾಲಯದಲ್ಲಿದ್ದ ಹುಂಡಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಎರಡು ದೇವಸ್ಥಾನದ ಹುಂಡಿಗಳಲ್ಲಿ ಇದ್ದ ಹಣವನ್ನು ತೆಗೆದುಕೊಂಡು ಗ್ರಾಮದ ಗಂಗಾಧರಪ್ಪ ಎಂಬುವವರ ಜಮೀನಿನಲ್ಲಿ ಹುಂಡಿಗಳನ್ನು ಬಿಸಾಕಿ ಹೋಗಿದ್ದಾರೆ. ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಕಳ್ಳರಿಗಾಗಿ ಹುಡುಕಾಟ ನಡೆಸಿದ್ದಾರೆ.
