ಬೆಂಗಳೂರು: ಚಾಯ್ವಾಲಾನಾಗಿ ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆಗೇರಿದ ಕಥೆ ಕೇಳಿದ್ದೀರಿ, ಇದೀಗ ಬೆಂಗಳೂರಿನ ಚುನಾವಣಾ ಅಖಾಡದಲ್ಲೂ ಒಬ್ಬ ಚಾಯ್ವಾಲಾ ಭರ್ಜರಿ ಮತ ಬೇಟೆ ನಡೆಸಿದ್ದಾರೆ.
ಹೌದು. ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಯ್ ವಾಲಾ ಎಂದೇ ಸಾಕಷ್ಟು ಫೇಮಸ್. ಗುಜರಾತಿನ ವಡ್ನಾಗರ್ ರೈಲ್ವೆ ಸ್ಟೇಷನ್ನಲ್ಲಿ ಚಹಾ ಮಾರುತ್ತಿದ್ದ ಮೋದಿ ಅವರು ಬಳಿಕ ದೇಶದ ಆಡಳಿತ ಚುಕ್ಕಾಣಿ ಹಿಡಿದದ್ದು ಈಗ ಇತಿಹಾಸವಾಗಿದೆ. ಹಾಗೆಯೇ ಇದೀಗ ಬೆಂಗಳೂರಲ್ಲೂ ಸೈಯದ್ ಆಸಿಫ್ ಬುಖಾರಿ ಎಂಬ ಚಹಾ ವ್ಯಾಪಾರಿ ಚುನಾವಣಾ ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ.
ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸೈಯದ್ ಚುನಾವಣಾ ಸ್ಪರ್ಧಾ ಕಣದಲ್ಲಿದ್ದಾರೆ. ಕ್ಯಾಲ್ಕುಲೇಟರ್ ಚಿಹ್ನೆ ಹೊತ್ತು ನಾನು ಚಾಯ್ ವಾಲಾ ನನಗೆ ಮತ ಹಾಕಿ ಎಂದು ಸೈಯದ್ ತಮ್ಮ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈ ಹಿಂದೆ ಬಿಬಿಎಂಪಿ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸೈಯದ್ ಆಸೀಫ್, ಈಗ ಲೋಕಸಭಾ ಅಖಾಡದಲ್ಲಿದ್ದಾರೆ. ಎಲೆಕ್ಷನ್ಗಾಗಿ 25 ಸಾವಿರ ಠೇವಣಿ ಹಣ ಜೊತೆಗೆ ಪ್ರಚಾರಕ್ಕಾಗಿ 5 ಲಕ್ಷ ರೂ. ಖರ್ಚು ಮಾಡ್ತಾ ಇರೋದಾಗಿ ಸೈಯದ್ ತಿಳಿಸಿದ್ದು, ಭ್ರಷ್ಟಮುಕ್ತ ಆಡಳಿತಕ್ಕಾಗಿ ಚುನಾವಣೆಗೆ ಧುಮುಕಿರೋದಾಗಿ ಹೇಳಿದ್ದಾರೆ.
ಬೆಂಗಳೂರಿನ ಜಾನ್ಸನ್ ಮಾರುಕಟ್ಟೆಯಲ್ಲಿ ಚಾಯ್ ಫಸ್ಟ್ ಎಂಬ ಮಳಿಗೆ ಹೊಂದಿರೋ ಸೈಯದ್ ಗುಣಾತ್ಮಕ ಬದಲಾವಣೆಯ ನಿರೀಕ್ಷೆಯಲ್ಲಿದ್ದಾರೆ. ಅದೇನೆ ಆಗಲಿ ಉದ್ಯಾನನಗರಿ ಕಣದಲ್ಲಿ ಕಾಣಿಸಿಕೊಂಡಿರೋ ಈ ಚಾಯ್ವಾಲಾ ಜನರ ಗಮನ ಸೆಳೆದಿದ್ದಾರೆ.