ಚಿಕ್ಕಮಗಳೂರು: ಭಾರೀ ತೆರಿಗೆ (Tax) ಏರಿಕೆ ಮಾಡಿರುವುದನ್ನು ಖಂಡಿಸಿ ಇಡೀ ಗ್ರಾಮ ಪಂಚಾಯತ್ (Village Panchayat) ವ್ಯಾಪ್ತಿಯ ಅಂಗಡಿಗಳನ್ನು ಬಂದ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಗ್ರಾಮದಲ್ಲಿ ನಡೆದಿದೆ.
ಇಷ್ಟು ವರ್ಷಗಳಿಂದ ಇಲ್ಲದ ತೆರಿಗೆಯನ್ನು ಈಗ ಏಕಾಏಕಿ ತೆರಿಗೆ ಏರಿಕೆ ಮಾಡಿರುವುದನ್ನು ಖಂಡಿಸಿ ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟು ಮುಚ್ಚಿ ವರ್ತಕರು ಜಯಪುರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
2022ರಲ್ಲಿ ಬಿಜೆಪಿ ಸರ್ಕಾರದ ಅವಧಿಯ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಇದೀಗ ಕಾಂಗ್ರೆಸ್ ಸರ್ಕಾರ ಗ್ರಾಮ ಪಂಚಾಯತ್ಗಳಿಗೆ ಆದೇಶ ಹೊರಡಿಸಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಜಯಪುರ ಗ್ರಾಮ ಪಂಚಾಯತ್ ಅಧಿಕಾರಿಗಳು ದಿಢೀರ್ ಎಂದು ತೆರಿಗೆ ಏರಿಸಿರುವುದರಿಂದ ಸುತ್ತಮುತ್ತಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ಹಾಗೂ ವರ್ತಕರು ಸಿಟ್ಟಿಗೆದ್ದಿದಾರೆ. ಇದನ್ನೂ ಓದಿ: ಮದ್ಯ ಪ್ರಿಯರಿಗೆ ಶಾಕ್ – ರಾಜ್ಯದಲ್ಲಿ ಮತ್ತೆ ಬಿಯರ್ ದರ ಏರಿಕೆ
ಸರ್ಕಾರದ ಉಚಿತ ಗ್ಯಾರಂಟಿ (Congress Guarantee) ಯೋಜನೆಗ ಹಣ ಸಂಗ್ರಹಿಸಲು ತೆರಿಗೆಯನ್ನು ಹೆಚ್ಚಿಸಿದ್ದಾರೆ. ಈ ಪ್ರಮಾಣದಲ್ಲಿ ಏರಿಕೆ ಮಾಡಿದರೆ ನಾವು ವಸ್ತುಗಳ ದರವನ್ನು ಏರಿಸಬೇಕಾಗುತ್ತದೆ. ಇದರಿಂದ ಜನ ಸಾಮಾನ್ಯರಿಗೆ ಹೊಡೆತ ಬೀಳುತ್ತದೆ ಎಂದು ವರ್ತಕರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂತು ಮಳಲಿ ಮಸೀದಿ – ಆಸ್ತಿ ತನ್ನದೆಂದು ಸಾಬೀತುಪಡಿಸಲು ವಕ್ಫ್ ಬೋರ್ಡ್ ತಯಾರಿ
ಎಷ್ಟು ಏರಿಕೆ?
ಕೃಷಿ ತೆರಿಗೆ ಸೇರಿದಂತೆ ಬಂಡವಾಳ ಆಧಾರಿತ ಕಟ್ಟಡಗಳ ಮೇಲೆ ಅಧಿಕವಾಗಿ ಸುಮಾರು ಏಳು ಪಟ್ಟು ಪ್ರಮಾಣದಲ್ಲಿ ತೆರಿಗೆ ಹೆಚ್ಚಾಗಿದ್ದು 2,500 ರೂ. ತೆರಿಗೆ ಇದ್ದ ವರ್ತಕರ ಕಟ್ಟಡಗಳಿಗೆ 14,000 ರೂ. ಹಾಗೂ 14,000 ರೂ. ಇದ್ದ ಕಟ್ಟಡಗಳಿಗೆ 40,000 ರೂ. ನಷ್ಟು ದಿಢೀರ್ ತೆರಿಗೆ ಏರಿಸಿರುವುದು ವರ್ತಕರು ಹಾಗೂ ಇನ್ನಿತರ ವ್ಯಾಪಾರಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಕೂಡಲೇ ಹೊಸ ತೆರಿಗೆ ನೀತಿಯನ್ನು ರದ್ದುಪಡಿಸಬೇಕೆಂದು ಹಳ್ಳಿಗರು ಪಟ್ಟು ಹಿಡಿದಿದ್ದಾರೆ. ಗ್ರಾಮ ಪಂಚಾಯತ್ ಕೂಡಲೇ ನೂತನ ತೆರಿಗೆ ನೀತಿಯನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರವಾದ ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.