ಮುಂಬೈ: ಸಂಬಂಧಿಕರ ಮನೆ ಕಾರ್ಯಕ್ರಮದ ಅಡುಗೆಗೆ ಕ್ರಿಮಿನಾಶಕ ಬೆರೆಸಿ, 5 ಜನರ ಸಾವಿಗೆ ಕಾರಣವಾಗಿದ್ದ ಆರೋಪಿ ಮಹಿಳೆಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ಪ್ರಗ್ಯಾ ಸುರ್ವಾಸ್ ಬಂಧಿತ ಮಹಿಳೆ. ಜೂನ್ 18ರಂದು ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆ ಮಹಾದ್ ಹಳ್ಳಿಯ ಸುಭಾಷ್ ಮನ್ನಾ ಎನ್ನುವ ಮನೆಯ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿತ್ತು.
ಪ್ರಗ್ಯಾ ಸುರ್ವಾಸ್ ತನ್ನ ಸಂಬಂಧಿ ಸುಭಾಷ್ ಮನ್ನಾ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ಅಲ್ಲದೇ ಕಾರ್ಯಕ್ರಮದ ನಿಮಿತ್ತ ತಯಾರಾಗಿದ್ದ ಅಡುಗೆಗೆ ಕ್ರಿಮಿನಾಶಕ ಬೆರೆಸಿ ಅತಿಥಿಗಳಿಗೆ ಉಣಬಡಿಸಿದ್ದಾಳೆ. ಅವಳ ಈ ಅಮಾನವೀಯ ಕೃತ್ಯದಿಂದಾಗಿ ಊಟ ಮಾಡಿದ್ದ 5 ಜನರು ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದರು.
ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ಕೈಗೊಂಡಿದ್ದ ರಾಯ್ಗಡ್ ಪೊಲೀಸರು, ಪ್ರಗ್ಯಾ ಸುರ್ವಾಸ್ ನನ್ನು ವಿಚಾರಿಸಿದ್ದಾರೆ. ಆಗ ಅವಳು ಕೌಟುಂಬಿಕ ಕಲಹದಿಂದಾಗಿ ತಾನು ಆಹಾರದಲ್ಲಿ ಕ್ರಿಮಿನಾಶಕ ಬೆರೆಸಿರುವುದಾಗಿ ಒಪ್ಪಿಕೊಂಡಿದ್ದಾಳೆ. ಪ್ರಗ್ಯಾ ಸುರ್ವಾಸ್ ವಿರುದ್ಧ ಈಗ ಕೊಲೆ ಹಾಗೂ ಕೊಲೆಗೆ ಯತ್ನ ಪ್ರಕರಣ ದಾಖಲಾಗಿದೆ.