ಮಂಡ್ಯ: ಇವರ ಜೊತೆ ಕೆಲಸ ಮಾಡುವಾಗ ಅದು ಸದ್ಗುಣದ ಕೆಲಸವಾಗಿತ್ತು. ಇವರನ್ನ ಬಿಟ್ಟು ಮಾಡಿದರೆ ಅದು ರಾಜಕೀಯ ಸ್ಟಂಟ್? ಎಂದು ಪ್ರಶ್ನಿಸಿ ಸಿಎಂ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯ ರಾಜಕೀಯ ಸ್ಟಂಟ್ ಎಂಬ ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಜೆಡಿಎಸ್ ಶಾಸಕ ಸುರೇಶ್ ಗೌಡ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವನ ಬಳಿ ಪಾಠ ಕಲಿಯುವ ಅಗತ್ಯ ನಮಗಿಲ್ಲ ಎಂದು ಏಕವಚನದಲ್ಲಿಯೇ ಚಲುವರಾಯಸ್ವಾಮಿ ವಿರುದ್ಧ ಹರಿಹಾಯ್ದರು. ಚಲುವರಾಯಸ್ವಾಮಿ ಬಿಜೆಪಿ ಸೇರೋದು ಗ್ಯಾರಂಟಿ. ಆಗಲೇ ಒಂದು ಹೊಸಲು ದಾಟಿರುವವರು ಇನ್ನೊಂದು ಹೊಸಲು ದಾಟಲ್ವ? ಇವುಗಳಿಗೆ ಮಾನಮರ್ಯಾದೆ ಇಲ್ಲ, ಬಿಜೆಪಿಗೆ ಹೋಗೆ ಹೊಗ್ತಾರೆ. ಕಾಂಗ್ರೆಸ್ ಪಕ್ಷ ನೆಮ್ಮದಿಯಿಂದ ಇತ್ತು. ಅದನ್ನು ಇವರು ಹಾಳು ಮಾಡಿ ಕುಲಗೆಡಿಸುತ್ತಿದ್ದಾರೆ ಎಂದು ಚಲುವರಾಯಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.
ಬಳಿಕ ಬಡವರಿಗೆ ಸಹಾಯವಾಗುವ ಯೋಜನೆಯನ್ನು ಸಿಎಂ ಜಾರಿಗೆ ತರಲಿ ಎಂಬ ಚಲುವರಾಯಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅತೀ ಬುದ್ದಿವಂತರು ಸಲಹೆ ನೀಡಿದ್ದಾರೆ ಪರಿಶೀಲಿಸಿ ಎಂದು ಕುಮಾರಸ್ವಾಮಿ ಅವರಿಗೆ ಹೇಳೋಣ. ಅರ್ಜೆಂಟಾಗಿ ಇವರಿಗೆ ಚುನಾವಣೆ ಬೇಕಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗ ಇವರೆಲ್ಲರೂ ಬಿಜೆಪಿಗೆ ಹೋಗುತ್ತಾರೆ. ಹಾಗಾಗಿ ಏನೆಲ್ಲಾ ಸಹಕಾರ ಬೇಕು ಅದನ್ನ ಇವರೆಲ್ಲಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಎಂದು ತಿಳಿದುಕೊಂಡಿದ್ದಾರೆ. ಜನ ಕೊಟ್ಟ ಅಧಿಕಾರವನ್ನು ಮಾರಿಕೊಂಡವರು ಇವರು, ನಮಗೆ ನೀತಿ ಪಾಠ ಹೇಳಲು ಬರಬೇಕಾ? ಎಂದು ಪ್ರಶ್ನಿಸಿ ಚಲುವರಾಯಸ್ವಾಮಿ ವಿರುದ್ಧ ಸುರೇಶ್ ಗೌಡ ಕೆಂಡಕಾರಿದರು.