ಧಾರವಾಡದ ವಿಶೇಷಚೇತನ ಹೆಣ್ಣುಮಗಳು ತಾವು ಸುಮಲತಾ (Sumalatha) ಅವರ ಅಭಿಮಾನಿ. ಅಂಬರೀಶ್ ಅವರ ಮತ್ತು ಸುಮಲತಾ ಅವರ ಫೋಟೋಗಳನ್ನು ಕತ್ತರಿಸಿ ಪುಸ್ತಕದಲ್ಲಿ ಅಂಟಿಸಿರುವುದಾಗಿ ಮತ್ತು ಸುಮಲತಾ ಅವರನ್ನು ಭೇಟಿ ಮಾಡಲು ಕಾಯುತ್ತಿರುವುದಾಗಿ ತಿಳಿಸಿದ್ದರು. ಚುನಾವಣೆ ಮತ್ತು ಇತರ ಬಿಡುವಿಲ್ಲದ ಕೆಲಸದಿಂದಾಗಿ ಈವರೆಗೂ ಅಭಿಮಾನಿಯನ್ನು ಸುಮಲತಾ ಖುದ್ದಾಗಿ ಭೇಟಿ ಮಾಡಲು ಆಗಿರಲಿಲ್ಲ. ಫೋನ್ ನಲ್ಲಿ ಮಾತನಾಡಿದ್ದರು. ಇದೀಗ ಖುದ್ದಾಗಿ ಪುತ್ರನ ಆರತಕ್ಷತೆಗೆ ಬರುವಂತೆ ಆಹ್ವಾನ ಪತ್ರಿಕೆಯನ್ನು ಅಭಿಮಾನಿಗೆ ನೀಡಿದ್ದಾರೆ ಸುಮಲತಾ.
ತಮ್ಮ ಅಭಿಮಾನಿ ಧಾರವಾಡದ ಸೌಭಾಗ್ಯ ಯಮನೂರು (Saubhagya Yamanur) ಎನ್ನುವ ಹೆಣ್ಣು ಮಗುವಿಗೆ ಸುಮಲತಾ ಅಂಬರೀಶ್ ಖುದ್ದಾಗಿ ಆಹ್ವಾನ ಪತ್ರಿಕೆ ನೀಡಿ ಅಭಿಷೇಕ್ –ಅವಿವಾ (Aviva) ಆರತಕ್ಷತೆಗೆ ಬನ್ನಿ ಎಂದು ಕರೆದಿದ್ದಾರೆ. ಹಾಗಾಗಿ ಇಂದು ತಂದೆ ನಿಗೋಜಿ ಯಮನೂರು ಮತ್ತು ತಾಯಿಯೊಂದಿಗೆ ಬೆಂಗಳೂರಿಗೆ ಆಗಮಿಸಿದ್ದಾರೆ ಸೌಭಾಗ್ಯ. ನಟಿ ಸುಮಲತಾ ಅವರನ್ನು ನೋಡಬೇಕು ಎನ್ನುವ ಹಲವು ವರ್ಷಗಳ ಕನಸನ್ನು ಇಂದು ಈಡೇರಿಸಿಕೊಳ್ಳುತ್ತಿದ್ದಾರೆ. ಸುಮಲತಾ ಅವರಿಗಾಗಿ ಧಾರವಾಡದ ವಿಶೇಷ ಸೀರೆ ಮತ್ತು ಪೇಡಾವನ್ನು ಉಡುಗೊರೆಯಾಗಿ ನೀಡಲಿದ್ದಾರಂತೆ ಸೌಭಾಗ್ಯ.
ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambarish) ಅವರ ಆರತಕ್ಷತೆ (Reception) ಇಂದು ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಅದ್ದೂರಿ ಆರತಕ್ಷತೆಗಾಗಿ ಅರಮನೆ ಮೈದಾನ ಸಿಂಗಾರಗೊಂಡಿದೆ. ಅಭಿಷೇಕ್ ಮತ್ತು ಅವಿವಾ ಜೋಡಿಗೆ ಹಾರೈಸುವುದಕ್ಕಾಗಿ ಇಂದು ಕೂಡ ದೇಶದ ವಿವಿಧ ಭಾಗಗಳಿಂದ ಗಣ್ಯರು ಬರುವ ನಿರೀಕ್ಷೆಯಿದೆ. ಸಿನಿಮಾ ಹಾಗೂ ರಾಜಕೀಯ ಗಣ್ಯರ ದೊಡ್ಡ ಪಟ್ಟಿಯೇ ಹರಿದಾಡುತ್ತಿದೆ. ಇದನ್ನೂ ಓದಿ:ಬೀಚ್ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ನಟಿ ಇಲಿಯಾನಾ
ಎರಡು ದಿನಗಳ ಹಿಂದೆಯಷ್ಟೇ ನಡೆದ ಮದುವೆ (Wedding) ಸಮಾರಂಭದಲ್ಲಿ ನಟರಾದ ರಜನಿಕಾಂತ್, ಸುದೀಪ್, ಯಶ್, ಕ್ರಿಕೆಟಿಗ ಅನಿಲ್ ಕುಂಬ್ಳೆ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಮಿಳು ನಟ ಮೋಹನ್ ಬಾಬು, ತೆಲುಗು ನಟ ನರೇಶ್, ನಟಿ ಪವಿತ್ರ ಲೋಕೇಶ್, ನಟಿ ಶುಭ್ರ ಅಯ್ಯಪ್ಪ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಸಾಕಷ್ಟು ಕಲಾವಿದರು ಹಾಗೂ ತಂತ್ರಜ್ಞರು ಆಗಮಿಸಿದ್ದರು.
ಇಂದು ಪ್ಯಾಲೇಸ್ ಗ್ರೌಂಡ್ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬಾಲಿವುಡ್ ನ ಖ್ಯಾತ ನಟ ಅಮಿತಾಭ್, ತೆಲುಗಿನ ಖ್ಯಾತ ನಟ ಚಿರಂಜೀವಿ, ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಸೇರಿದಂತೆ ಹಲವು ಸಚಿವರು ಭಾಗಿಯಾಗುವ ನಿರೀಕ್ಷೆಯಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ- ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.
ಅಭಿಷೇಕ್- ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ ಬಿಡಪ ಅವರ ಪುತ್ರಿ ಅವಿವ ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಒಪ್ಪಿಗೆಯರ ಮೇರೆಗೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಒಂದು ವಾರಗಳಿಂದ ಅಂಬಿ ಮನೆಯಲ್ಲಿ ಸಡಗರ ಮನೆಮಾಡಿದೆ. ಅಂಬರೀಷ್ ಅವರ ಮನೆ ಮುಂದೆ ಹಸಿರು ಚಪ್ಪರ ಹಾಕಲಾಗಿದೆ. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿದೆ. ವಿದ್ಯುತ್ ದೀಪಗಳಿಂದ ಇಡೀ ಮನೆ ಅಲಂಕಾರಗೊಂಡಿದೆ.