ಬೆಂಗಳೂರು: ಕಾವೇರಿ ವಿಚಾರದಲ್ಲಿ ಸಂಸದರ ಜವಾಬ್ದಾರಿ ಇಲ್ಲ. ಎಲ್ಲಾ ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸೋಮವಾರ ಹೇಳಿಕೆ ನೀಡಿದರು. ಇದು ವಿವಾದದ ಸ್ವರೂಪ ಪಡೆಯುತ್ತಲೇ ಇಂದು ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ನಾನು ಒಂದು ಸಂದರ್ಶನದಲ್ಲಿ ಮಾತನಾಡಿದ ಮಾತನ್ನು ಟ್ವಿಸ್ಟ್ ಮಾಡಿ ಬದಲಾಯಿಸಿ ಅದಕ್ಕೆ ಬೇರೆ ಬಣ್ಣ ಕೊಟ್ಟು ವೈರಲ್ ಮಾಡಿದ ವಿಷಯ ಕೇಳಿ ಬೇಜಾರಾಗುತ್ತಿದೆ. ಏಕೆಂದರೆ ಅತಂಹದೊಂದು ಹೇಳಿಕೆ ನೀಡುವ ಬೇಜವಾಬ್ದಾರಿ ಹಾಗೂ ಆ ಸ್ವಭಾವ ನನಗೆ ಇಲ್ಲ. ನನ್ನ ಸ್ವಭಾವ ಏನೂ ಎಂಬುದು ಚುನಾವಣೆ ಸಂದರ್ಭದಿಂದ ನೋಡಿಕೊಂಡು ಬರುತ್ತಿದ್ದೀರಾ. ನಾನು ಒಬ್ಬರ ಬಗ್ಗೆ ಟೀಕೆ ಮಾಡಿರುವುದಾಗಿ, ಒಬ್ಬ ಬಗ್ಗೆ ಕೆಳಮಟ್ಟದ ಮಾತನಾಡಿದ್ದಾಗಲಿ ನಾನು ಯಾವತ್ತೂ ನಡೆದುಕೊಂಡಿಲ್ಲ. ಮುಂದೆ ಕೂಡ ನನ್ನ ಸ್ವಭಾವ ಹೀಗೆ ಇರುತ್ತೆ ಎಂದರು.
ಅಲ್ಲದೆ ನಾನು ಏನೂ ಮಾಡಬೇಕು. ನನ್ನ ಉದ್ದೇಶ ಏನೂ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಅದರೇ ಪದೇ ಪದೇ ಒಂದು ವಿಷಯವನ್ನು ಟ್ವಿಸ್ಟ್ ಮಾಡಿದರೆ ಅದು ಟೈಂ ವೇಸ್ಟ್ ಹಾಗೂ ತಪ್ಪು ಸಂದೇಶ ಜನರಿಗೆ ಹೋಗುತ್ತೆ. ಅಂಬರೀಶ್ ಅವರು ಏನೂ ಎಂಬುದು ಎಲ್ಲರಿಗೂ ಗೊತ್ತು. ಕಾವೇರಿ ವಿಷಯಕ್ಕಾಗಿ ಅವರು ಯೂನಿಯನ್ ಮಿನಿಸ್ಟರ್ ಪದವಿಗೆ ರಾಜೀನಾಮೆ ನೀಡಿದ್ದರು. ನಾನು ಅಂಬರೀಶ್ ಮಾರ್ಗದರ್ಶನದಲ್ಲಿ ನಾನು ನಡೆಯುತ್ತಿದ್ದೇನೆ ಎಂದು ಹೇಳಿದರು.
ನೀವು ಕೆಲವು ರಾಜಕಾರಣಿಗಳನ್ನು ನೋಡಿರುತ್ತೀರಾ. ಆ ದಾರಿಯಲ್ಲಿ ನನಗೆ ನಡೆದುಕೊಂಡು ಹೋಗಲು ಇಷ್ಟವಿಲ್ಲ. ಕೆಲವರು ರಾಜಕಾರಣಿಗಳು ಒಂದೊಂದು ದಿನಕ್ಕೆ ಒಂದೊಂದು ಮಾತನ್ನು ಬದಲಾಯಿಸುತ್ತಾರೆ. ಬೇರೆ ರಾಜಕಾರಣಿಗಳ ರೀತಿ ನಾನಲ್ಲ. ನನ್ನನ್ನು ಆ ಲಿಸ್ಟ್ನಲ್ಲಿ ಇಡಬೇಡಿ. ನಾನು ಮಾಡಿರುವ ಕಮ್ಯುನಿಕೇಷನ್ ಮಿಸ್ ಆಗಿರಬಹುದು. ಮಂಡ್ಯ ರೈತರ ಪರವಾದ ಹೋರಾಟವೇ ನನ್ನ ಆದ್ಯತೆ ಎಂದು ಸ್ಪಷ್ಟಪಡಿಸಿದರು.