ಮಂಡ್ಯ/ಬೆಂಗಳೂರು: ಒಂದೆಡೆ ಆಪರೇಷನ್ ಕಮಲ ಜೋರಾಗಿದ್ರೆ, ಮತ್ತೊಂದೆಡೆ ಗೌಡ್ತಿಯರ ಗದ್ದಲ ಜೋರಾಗಿದೆ. ಜೆಡಿಎಸ್ ಟೀಕೆಯ ನಡುವೆಯೇ ಇಂದು ಆದಿಚುಂಚನಗಿರಿ ಮಠಕ್ಕೆ ಸುಮಲತಾ ಅಂಬರೀಶ್ ಭೇಟಿ ಕೊಡುತ್ತಿದ್ದಾರೆ. ಇತ್ತ ಅನಿತಾ ಕುಮಾರಸ್ವಾಮಿ ಕೂಡಾ ನಾನು ತೆಲುಗಿನವಳು ಅಲ್ಲ ಅಂತಿದ್ದಾರೆ.
ಸುಮಲತಾ ಆಂಧ್ರದ ಗೌಡ್ತಿ ಅಂತಾ ಜೆಡಿಎಸ್ ಎಂಎಲ್ಸಿ ಶ್ರೀಕಂಠೇಗೌಡ ಟೀಕೆ ಮಾಡಿದ್ರೆ ಮಂಡ್ಯಕ್ಕೆ ಸುಮಲತಾ ಕೊಡುಗೆ ಏನು ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ. ಜೆಡಿಎಸ್ ನಾಯಕರ ಟೀಕೆಗೆ ಕ್ಯಾರೇ ಎನ್ನದ ಸುಮಲತಾ ಅಂಬರೀಶ್ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಕಾಲಭೈರವೇಶ್ವರನ ಸನ್ನಿಧಾನದಲ್ಲಿ ಬೆಳಗ್ಗೆ 8.30ರ ಸುಮಾರಿಗೆ ಪೂಜೆ ಸಲ್ಲಿಸಲಿದ್ದಾರೆ. ನಂತರ ರಾಜಕೀಯ ಪ್ರವೇಶದ ಬಗ್ಗೆ ನಿರ್ಮಲಾನಂದ ಸ್ವಾಮೀಜಿ ಜೊತೆ ಚರ್ಚಿಸಲಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.
ಮಂಡ್ಯ ಫೀಲ್ಡ್ನಲ್ಲಿ ರಾಜಕೀಯದ ರಣರಂಗಕ್ಕೆ ಸುಮಲತಾ ವೇದಿಕೆ ಗಟ್ಟಿಮಾಡಿಕೊಳ್ಳುತ್ತಿರುವ ಹೊತ್ತಿನಲ್ಲೇ ಶಾಸಕಿ, ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ ಸಣ್ಣದಾಗಿ ಕನಲಿ ಹೋಗಿದ್ದಾರೆ. ಜಾಗ್ವಾರ್ ಚಿತ್ರದ ಸಂದರ್ಶದಲ್ಲಿ ಸಿಎಂ “ನನ್ನ ಪತ್ನಿಯೂ ತೆಲುಗು ಮೂಲದವಳು” ಎಂದಿರುವ ಹಳೆಯ ವಿಡಿಯೋ ಈಗ ವೈರಲ್ ಆಗಿದೆ. ಇದರಿಂದ ಜೆಡಿಎಸ್ ಬುಡಕ್ಕೆ ಬಂದಿರುವ ತಪ್ಪನ್ನು ಅನಿತಾ ಸರಿಮಾಡಲು ನಿಂತಿದ್ದಾರೆ. ಅಲ್ಲದೆ ಮಾಧ್ಯಮದವರ ಬಳಿ ಬಂದು, ನೀವೆಲ್ಲ ಸುದ್ದಿ ಮಾಡ್ತಿರುವಂತೆ ನಾನು ತೆಲುಗಿನವಳಲ್ಲ, ಕನ್ನಡತಿ. ಕೋಲಾರ ಜಿಲ್ಲೆ ನನ್ನ ಮೂಲ. ನನಗೆ ತೆಲುಗು ಒಂದಕ್ಷರನೂ ಬರಲ್ಲ ಅಂದಿದ್ದಾರೆ.
ಒಟ್ಟಿನಲ್ಲಿ ಜೆಡಿಎಸ್ ಕಟು ಟೀಕೆಯಿಂದ ಸುಮಲತಾ ಕೊಂಚ ಸ್ಟ್ರಾಂಗ್ ಆಗಿಯೇ ಜೆಡಿಎಸ್ಗೆ ಏಟು ಕೊಡುವ ಸಾಧ್ಯತೆ ಇದೆ. ಜೆಡಿಎಸ್ ಮಾಡಿರುವ ತೆಲುಗು, ಗೌಡ್ತಿ ಡ್ಯಾಮೇಜನ್ನು ಸರಿಪಡಿಸಲು ಅನಿತಾನೂ ರೆಡಿಯಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv