ನಿನ್ನೆಯಷ್ಟೇ ಬಿಗ್ ಬಾಸ್ (Bigg Boss) ಸೀಸನ್ 9ರ ಗ್ರ್ಯಾಂಡ್ ಫಿನಾಲೆ ಮುಕ್ತಾಯವಾಗಿದೆ. ಸೋಲು ಗೆಲುವು ಏನೇ ಇರಲಿ, ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿದ್ದ ಅಷ್ಟೂ ಸ್ಪರ್ಧಿಗಳು ತಮ್ಮ ಸಾಮರ್ಥ್ಯವನ್ನು ಮೀರಿ ಮನರಂಜಿಸಲು ಪ್ರಯತ್ನಪಟ್ಟಿದ್ದಾರೆ. ತಮ್ಮದಲ್ಲದ ವ್ಯಕ್ತಿತ್ವವನ್ನು ತೋರಿಸಿದ್ದಾರೆ. ಕೆಲವರು ಒಂದೇ ವಾರಕ್ಕೆ ಮನೆಯಿಂದ ಆಚೆ ಬಂದರೆ, ಇನ್ನೂ ಕೆಲವರು ಫಿನಾಲೆ ವೇದಿಕೆ ಹತ್ತಿದ್ದಾರೆ. ಹಾಗಾಗಿ ಫಿನಾಲೆ ವೇದಿಕೆ ಒಂದು ರೀತಿಯಲ್ಲಿ ಭಾವುಕ ಪ್ರಪಂಚವನ್ನೇ ಸೃಷ್ಟಿ ಮಾಡಿತ್ತು.
ಅದರಲ್ಲೂ ವೀಕೆಂಡ್ ನಲ್ಲಿ ಬಂದು ಸ್ಪರ್ಧಿಗಳ ಜೊತೆ ಮುಖಾಮುಖಿ ಆಗುವ, ಪ್ರತಿ ಸ್ಪರ್ಧಿಯ ಗುಣ ಅವಗುಣಗಳನ್ನು ತಿಳಿಸುವ, ಕೆಲವೊಂದು ಬಾರಿ ಕೋಪಗೊಳ್ಳುವ ಸುದೀಪ್ (Sudeep), ಫಿನಾಲೆ ವೇದಿಕೆಯ ಮೇಲೆ ಭಾವುಕರಾಗಿ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು. ಸುದೀಪ್ ಅವರ ಬಿಗ್ ಬಾಸ್ ಜರ್ನಿಯ ತುಣುಕುಗಳನ್ನು ತೋರಿಸಲಾಯಿತು. ಅದನ್ನು ನೋಡುತ್ತಿದ್ದ ಸುದೀಪ್, ಅಕ್ಷರಶಃ ಕಣ್ಣೀರಿಟ್ಟರು. ಇದನ್ನೂ ಓದಿ: ದಿವ್ಯಾ ಉರುಡುಗ ಮೇಲೆ ಹಲವು ಅನುಮಾನ ವ್ಯಕ್ತ ಪಡಿಸಿದ ಆರ್ಯವರ್ಧನ್ ಗುರೂಜಿ
ಬಿಗ್ ಬಾಸ್ ಜೊತೆಗಿನ ಬಾಂಧವ್ಯವನ್ನು ಹಂಚಿಕೊಂಡ ಸುದೀಪ್, ‘ಇದು ನನ್ನ ನೈಜ ಜೀವನ. ಬಣ್ಣ ಹಚ್ಚದೇ ಮಾತನಾಡುವ ಜೀವನ. ನಾನು ನಾನಾಗಿಯೇ ಕಾಣಿಸಿಕೊಳ್ಳುವ ವೇದಿಕೆ. ಈ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ನಾನು ಯಾವತ್ತಿಗೂ ನಿಮ್ಮ ಪ್ರೀತಿ ಬಯಸಿಯೇ ಕಾಯುತ್ತೇನೆ’ ಎಂದು ಮಾತನಾಡಿದರು. ಕೆಲವೊತ್ತು ಮಾತುಗಳನ್ನೇ ನಿಲ್ಲಿಸಿ, ಕಣ್ಣೀರು ಒರೆಯಿಸಿಕೊಂಡರು.
ಬಿಗ್ ಬಾಸ್ ಸೀಸನ್ 9ರ ತೊಂಬತ್ತೊಂಬತ್ತು ದಿನಗಳ ಆಟಕ್ಕೆ ನಿನ್ನೆ ಮುಕ್ತಾಯ ಹಾಡಲಾಗಿದೆ. ಈ ಬಾರಿ ರೂಪೇಶ್ ಶೆಟ್ಟಿ (Rupesh Shetty) ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದರೆ, ರಾಕೇಶ್ ಅಡಿಗ (Rakesh Adiga)ರನ್ನರ್ ಆಗಿದ್ದಾರೆ. ಬಿಗ್ ಬಾಸ್ ಟೈಟಲ್ ಗೆದ್ದ ರೂಪೇಶ್ ಶೆಟ್ಟಿ ಬಿಗ್ ಬಾಸ್ ಟ್ರೋಫಿ ಮತ್ತು 60 ಲಕ್ಷ ರೂಪಾಯಿಗಳ ಬಹುಮಾನ ಪಡೆದಿದ್ದಾರೆ. ತಮ್ಮ ಜರ್ನಿ ಯಾವತ್ತಿಗೂ ಮರೆಯಲಾರದ್ದು ಎಂದು ಪ್ರತಿಕ್ರಿಯಿಸಿದ್ದಾರೆ.