ಬೀದರ್: ಮರಗಳಿಗೆ ರಾಖಿ ಕಟ್ಟುವ ಮೂಲಕ ವಿದ್ಯಾರ್ಥಿನಿಯರು ಪರಿಸರ ರಕ್ಷಣೆಗೆ ಮುಂದಾಗಿದ್ದಾರೆ.
ಮರ ಉಳಿಸಿ ಕಾಡು ಬೆಳಸಿ ಎಂದು ವಿದ್ಯಾರ್ಥಿನಿಯರು ಪರಿಸರದ ಜಾಗೃತಿ ಮೂಡಿಸಿದ್ದಾರೆ. ಮರಗಳ ಮಾರಣಹೋಮದಿಂದಾಗಿ ಇಂದು ಪ್ರಕೃತಿ ವಿಕೋಪಗಳು, ಬರಗಾಲ ಸೃಷ್ಟಿಯಾಗಿ ಹನಿ ಹನಿ ನೀರಿಗೂ ರಾಜ್ಯದಲ್ಲಿ ಹಾಹಾಕಾರ ಶುರುವಾಗಿದ್ದು, ಇಂದು ಪರಿಸರವನ್ನು ಹೇಗೆ ನಾವು ಕಾಪಾಡಿಕೊಳ್ಳಬೇಕು ಎಂದು ನೂರಾರು ವಿದ್ಯಾರ್ಥಿನಿಯರು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ.
ಬೀದರ್ ತಾಲೂಕಿನ ಚಿಟ್ಟಾ ಅರಣ್ಯ ಪ್ರದೇಶದಲ್ಲಿರುವ ನೂರಾರು ಮರಗಳಿಗೆ ರಾಖಿ ಕಟ್ಟು ಮೂಲಕ “ಹಸಿರೆ ಉಸಿರು” ಎಂಬ ಜಾಗತಿಕ ಸಂದೇಶವನ್ನು ವಿದ್ಯಾರ್ಥಿನಿಯರು ನೀಡಿದ್ದಾರೆ. ವಿದ್ಯಾರ್ಥಿನಿಯರಿಗೆ ಅರಣ್ಯಾಧಿಕಾರಿಗಳು ಸಾಥ್ ನೀಡಿದ್ದು, ಮರಗಳಲ್ಲಿ ಸಹೋದರತ್ವ ಕಾಣುವ ಮೂಲಕ ಮರಕ್ಕೆ ರಾಖಿ ಕಟ್ಟುವ ಮೂಲಕ ವಿನೂತನವಾಗಿ ಪರಿಸರ ಪ್ರೇಮವನ್ನು ವ್ಯಕ್ತಪಡಿಸಿದರು. ಈ ವಿನೂತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು, ಶಿಕ್ಷಕರು, ಪೋಷಕರು ಹಾಗೂ ಅರಾಣ್ಯಾಧಿಕಾರಿಗಳು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿನಿ ಐಶ್ವರ್ಯ, ಅರಣ್ಯಾಧಿಕಾರಿಗಳು ನಮ್ಮ ಶಾಲೆಗೆ ಬಂದು ಗಿಡಗಳ ಮಾಹಿತಿ ನೀಡಿದ್ದರು. ಬಳಿಕ ಮರಗಳಿಗೆ ರಾಖಿ ಕಟ್ಟಬೇಕು ಎಂದು ಹೇಳಿದ್ದರು. ಹಾಗಾಗಿ ನಾವು ಅರಣ್ಯಕ್ಕೆ ಬಂದು ಎಲ್ಲ ಮರಗಳಿಗೆ ರಾಖಿ ಕಟ್ಟಿದ್ದೇವೆ. ರಾಖಿ ಕಟ್ಟಲು ಕಾರಣ ಏನೆಂದರೆ ನಮ್ಮ ಅಣ್ಣ-ತಮ್ಮನಿಗೆ ರಾಖಿ ಕಟ್ಟಿದ್ದರೆ ಅವರು ನಮ್ಮನ್ನು ಹೇಗೆ ರಕ್ಷಿಸುತ್ತಾರೋ, ಹಾಗೆಯೇ ಮರಗಳು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ಹೇಳಿದ್ದಾರೆ. ಹಾಗಾಗಿ ಎಲ್ಲ ಗಿಡಗಳಿಗೆ ರಾಖಿ ಕಟ್ಟಿದ್ದೇವೆ ಎಂದು ಹೇಳಿದ್ದಾಳೆ.