ಬಾಗಲಕೋಟೆ: ಸೆಮಿಸ್ಟರ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಕಾಲೇಜ್ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್ ರೂಮ್ ನ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ನಗರದ ಬಸವೇಶ್ವರ ಸೈನ್ಸ್ ಕಾಲೇಜ್ ನಲ್ಲಿ ಬಿಎಸ್ಸಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಸೌಮ್ಯ ಆವಟಿ ಎಂದು ಗುರುತಿಸಲಾಗಿದೆ. ಬುಧವಾರವಷ್ಟೇ ಮೊದಲ ಸೆಮಿಸ್ಟರ್ ನ ರಿಸಲ್ಟ್ ಬಂದಿದ್ದು, ಪ್ರಾಣಿ ಶಾಸ್ತ್ರ ವಿಷಯದಲ್ಲಿ ಫೇಲ್ ಆಗಿದ್ದಳು ಎನ್ನಲಾಗಿದೆ.
ಇದೇ ಕಾರಣದಿಂದ ಮನನೊಂದು ಸೌಮ್ಯ ಗುರುವಾರ ಮಧ್ಯಾಹ್ನ ರೂಮಿನಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೌಮ್ಯ ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ನಿವಾಸಿಯಾಗಿದ್ದು, ಬಸವೇಶ್ವರ ಕಾಲೇಜ್ ಗೆ ಸೇರಿದ ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದಳು.
ಇತ್ತ ಸುದ್ದಿ ತಿಳಿಯುತ್ತಿದ್ದಂತೆ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತ ಸೌಮ್ಯಳ ಸಹೋದರಿಯೂ ಸಹ ಇದೇ ಕಾಲೇಜ್ ನಲ್ಲಿಯೇ ವ್ಯಾಸಂಗ ಮಾಡುತ್ತಿದ್ದು, ಬುಧವಾರ ಸೌಮ್ಯ ತನ್ನ ಸಹೋದರಿ ಮುಂದೆಯೂ ಫೇಲ್ ಆಗಿದ್ದಕ್ಕೆ ಮನನೊಂದುಕೊಂಡು ಮಾತನಾಡಿದ್ದು, ಗುರುವಾರ ಆತ್ಮಹತ್ಯೆಗೆ ಶರಣಾದ್ದಾಳೆ.