ಬಾಗಲಕೋಟೆ: ಸದ್ಯ ಜನ ಎಲ್ಲ ಕಡೆ ನಿಖಿಲ್ ಎಲ್ಲಿದ್ದೀಯಪ್ಪ ಅಂತಿದ್ದಾರೆ. ಈ ಚುನಾವಣೆ ನಂತರ ಸಿಎಂ ಕುಮಾರಸ್ವಾಮಿ ಎಲ್ಲಿದ್ದೀಯಪ್ಪ ಅಂತ ಕೇಳಬೇಕಾಗುತ್ತೆಂದು ಮಾಜಿ ಸಚಿವ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.
ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ್ ಪರ ಪ್ರಚಾರದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಎಲ್ಲಾ ಸರ್ಕಾರದ ಅನುದಾನವನ್ನು ಕೇವಲ ಐದು ಕ್ಷೇತ್ರಗಳಲ್ಲಿ ಹಂಚುತ್ತಿದ್ದಾರೆ. ಐದು ಜಿಲ್ಲೆಗಳಿಗೆ ಅನುದಾನ ಕೊಟ್ಟು ಕಮೀಷನ್ ಪಡೆದಿದ್ದಾರೆ. ಆ ಹಣವನ್ನು ನಿಖಿಲ್ ಸ್ಪರ್ಧೆ ಮಾಡಿರುವ ಕ್ಷೇತ್ರದಲ್ಲಿ ಹಂಚುತ್ತಿದ್ದಾರೆ. ಮಂಡ್ಯದಲ್ಲಿ ನೂರಕ್ಕೆ ನೂರರಷ್ಟು ನಿಖಿಲ್ ಸೋಲಲಿದ್ದು, ಸುಮಲತಾ ಗೆಲ್ಲುತ್ತಾರೆ. ಚುನಾವಣೆ ನಂತರ ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಅಂತ ಭವಿಷ್ಯ ನುಡಿದರು.
ಈ ಚುನಾವಣೆಯಲ್ಲಿ ಮಂಡ್ಯ, ಹಾಸನ, ತುಮಕೂರು ಮೂರು ಕ್ಷೇತ್ರದಲ್ಲಿ ಜೆಡಿಎಸ್ ಸೋಲುತ್ತದೆ. ಬಿಜೆಪಿ 24 ಸ್ಥಾನದಲ್ಲಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯನವರ ಭಾವಚಿತ್ರ ಕೂಡ ಮೈತ್ರಿ ಪಕ್ಷದ ಪ್ರಚಾರ ಪೋಸ್ಟರ್ ನಲ್ಲಿ ಇಲ್ಲ. ಕಾಂಗ್ರೆಸ್ ಪಕ್ಷದವರು ಸಿದ್ದರಾಮಯ್ಯ ಬೇಡ ಅಂತಿದ್ದಾರೆ. ಇಡೀ ರಾಜ್ಯದಲ್ಲಿ ಅವರನ್ನು ಯಾರು ಪ್ರಚಾರಕ್ಕೆ ಕರೆಯುತ್ತಿಲ್ಲ. ಸಿದ್ದರಾಮಯ್ಯರನ್ನ ಜೆಡಿಎಸ್ ಕಾಂಗ್ರೆಸ್ನವರು ದೂರ ಇಟ್ಟಿದ್ದಾರೆ. ಸಿದ್ದರಾಮಯ್ಯ ಆಟ ನೂರಕ್ಕೆ ನೂರರಷ್ಟು ಇಡೀ ರಾಜ್ಯದಲ್ಲಿ ಎಲ್ಲೂ ನಡೆಯುವುದಿಲ್ಲ ಎಂದು ಟೀಕಿಸಿದರು.