ಚಿಕ್ಕೋಡಿ: ಉತ್ತರ ಕರ್ನಾಟಕ ಹೋರಾಟದ ನೇತೃತ್ವ ವಹಿಸಿದ್ದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು ಸಿಎಂ ಕುಮಾರಸ್ವಾಮಿಯವರಿಗೆ ಎಲ್ಲಾ ಮಠಾಧೀಶರುಗಳ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗದ ರೀತಿಯಲ್ಲಿ ನಾನು ನೋಡಿಕೊಳ್ಳುತ್ತೆನೆ, ಹಲವು ಪ್ರಮುಖ ಇಲಾಖೆಯ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರ ಮಾಡಲು ಸೂಚನೆ ನೀಡಿದ್ದು, ಆದಷ್ಟು ಬೇಗ ಬೆಳಗಾವಿಗೆ ಬರುತ್ತೇನೆ ಎಂದು ಸಿಎಂ ಭರವಸೆ ನೀಡಿರುವುದಕ್ಕೆ ಶ್ರೀಗಳು ಅಭಿನಂದನೆ ಸಲ್ಲಿಸಿ, ಆದಷ್ಟು ಬೇಗ ಕುಮಾರಸ್ವಾಮಿ ಅವರ ಕನಸಾಗಿರುವ ಸುವರ್ಣ ಸೌಧದಲ್ಲಿ ಸದಾ ಚಟುವಟಿಕೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ಕೇಳಿಕೊಂಡಿದ್ದಾರೆ.
ಎಲ್ಲಾ ರಾಜಕೀಯ ನಾಯಕರು ಪಕ್ಷಾತೀತವಾಗಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಶ್ರಮಿಸಬೇಕು. ಯಾವುದೇ ಮಠಾಧೀಶರಿಗೂ ರಾಜ್ಯ ಒಡೆಯುವ ಇಚ್ಛೆ ಇಲ್ಲ. ಅಲ್ಲದೇ ಮೈಸೂರು ರಾಜಮಾತೆ ಪ್ರಮೋದಾ ದೇವಿಯವರು ಉತ್ತರ ಕರ್ನಾಟಕದ ಅಭಿವೃದ್ಧಿ ಪಡಿಸುವಂತೆ ಮಾತನಾಡಿದ್ದು ನಮಗೆ ಖುಷಿ ತಂದಿದೆ ಎಂದು ಹೇಳಿಕೆ ನೀಡಿದ್ದಾರೆ.