ಬಳ್ಳಾರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಬೇಕು ಅಂತ ಹಲವು ಶಾಸಕರು ಹೇಳುತ್ತಿದ್ದಾರೆ. ಈ ಕುರಿತು ಕಂಪ್ಲಿ ಕ್ಷೇತ್ರದ ಶಾಸಕ ಜೆ ಎನ್ ಗಣೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು. ಸುಮಾರು 40-50 ಮಂದಿ ಶಾಸಕರು ಕೂಡ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಮಾಡಬೇಕು ಎಂಬುದು ಅನಿಸಿಕೆಯನ್ನು ಹೊಂದಿದ್ದಾರೆ ಅಂತ ಹೇಳಿದ್ರು.
ಮುಂದೆ ಅಥವಾ ಇನ್ನೊಂದು ಚುನಾವಣೆಗೆ ಸಿಎಂ ಆಗೋದು ಬೇರೆ ವಿಚಾರವಾಗಿದೆ. ಆದ್ರೆ ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಹೀಗಾಗಿ ಅವರು ಮತ್ತೊಮ್ಮೆ ಸಿಎಂ ಆಗಬೇಕೆಂಬುದು ನಮ್ಮ ಕನಸಾಗಿದೆ ಅಂದ್ರು.
ಹಾಲಿ ಮುಖ್ಯಮಂತ್ರಿಗಳ ಅಧಿಕಾರದಲ್ಲಿ ಆಕ್ಷೇಪಣೆ ಇಲ್ಲ. ಇದು ನಮ್ಮ ವೈಯಕ್ತಿಕ ಅಭಿಪ್ರಾಯವಾಗಿದೆ. ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ಸಂಘಟನೆ ಮಾಡಿ, ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವ ಕನಸು ಇಟ್ಟುಕೊಂಡಿದ್ದೇವೆ ಎಂದರು.
ಈ ಬಗ್ಗೆ ಯಾವುದೇ ಕಾರ್ಯತಂತ್ರಗಳನ್ನು ರೂಪಿಸಿಲ್ಲ ಅಂತ ಸ್ಪಷ್ಟಪಡಿಸಿದ ಅವರು, ಸದ್ಯ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದು, ಮುಂಬರುವ ದಿನಗಳಲ್ಲಿ ಈ ಬಗ್ಗೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬಳಿ ಚರ್ಚೆ ನಡೆಸಿ, ತೀರ್ಮಾನ ತೆಗೆದುಕೊಳ್ಳುತ್ತೇವೆ ಅಂತ ಹೇಳಿದ್ರು.
ಬಳ್ಳಾರಿಯಲ್ಲಿ 6 ಜನ ಕಾಂಗ್ರೆಸ್ ಶಾಸಕರಿದ್ದು, ಇದರಲ್ಲಿ ನೀವು ಸಚಿವ ಸ್ಥಾನದ ಆಕಾಂಕ್ಷಿನಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಇಡೀ ರಾಜ್ಯದಲ್ಲಿ ಹೆಚ್ಚು ಶಾಸಕರು ಗೆದ್ದಿರೋದು ಬಳ್ಳಾರಿಯಲ್ಲಿ. ಸದ್ಯ ಜಿಲ್ಲೆಗೆ ಡಿಕೆ ಶಿವಕುಮಾರ್ ಅವರು ಜಿಲ್ಲಾ ಉಸ್ತುವಾರಿಯಾಗಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಜನಗಳ ಅಭಿಪ್ರಾಯಕ್ಕೆ ಹೆಚ್ಚಿನ ಒತ್ತು ಕೊಡುತ್ತೇವೆ. 6 ಜನ ಶಾಸಕರು ಗೆದ್ದು, ಜಿಲ್ಲೆಯ ಒಬ್ಬರಿಗೆ ಸಚಿವ ಸ್ಥಾನ ಕೊಡದಿದ್ದರೆ ಜಿಲ್ಲೆಗೆ ಇರುಸುಮುರುಸು ಉಂಡಾಗುವುದು ಸಾಮಾನ್ಯವಾಗಲಿದೆ. ಹೀಗಾಗಿ ಗುದ್ದಾಟ ಬೇಡ ಯಾರಾದ್ರೂ ಒಬ್ಬರು ಸಚಿವರಾಗಿ ನೇಮಕವಾಗಲಿ ಅಂತ ಅವರು ಹೇಳಿದ್ರು.
ಲೋಕಸಭೆ ಚುನಾವಣೆ ಇರೋದ್ರಿಂದ ಸದ್ಯ ಸಚಿವ ಸಂಪುಟ ವಿಸ್ತರಣೆ ಮಾಡಲ್ಲ ಅನ್ನೋದು ನನ್ನ ಅನಿಸಿಕೆ. ಯಾಕಂದ್ರೆ ಸಾಕಷ್ಟು ಅಸಮಾಧಾನಗಳಿವೆ. ಹೀಗಾಗಿ ಅಧಿವೇಶನದ ಬಳಿಕ ಸಚಿವ ಸಂಪುಟ ವಿಸ್ತರಣೆ ಆಗಲ್ಲ. ಒಟ್ಟಿನಲ್ಲಿ ಈ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಆದ್ರೆ ಸಿದ್ದರಾಮಯ್ಯ ಅವರು ಸಿಎಂ ಆಗಿರುತ್ತಿದ್ದರೆ ಈಗಾಗಲೇ ಸಂಪುಟ ವಿಸ್ತರಣೆ ಆಗುತ್ತಿತ್ತು ಅಂತ ಅವರು ನುಡಿದ್ರು.
ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗುವ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv