ಕಲಬುರಗಿ: 100 ಕೋಟಿಗೂ ಅಧಿಕ ಬೆಲೆ ಬಾಳುವ ಸರ್ಕಾರಿ ಜಮೀನನ್ನು ಖಾಸಗಿ ಸಿಮೆಂಟ್ ಕಾರ್ಖಾನೆಗೆ ಲೀಸ್ಗೆ ಕೊಡಲು ಸಿಎಂ ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ.
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಬೆನಕನಳ್ಳಿ ಮತ್ತು ಕೊಡ್ಲಾ ಗ್ರಾಮಗಳ 1,104 ಎಕರೆ ಸರ್ಕಾರಿ ಜಮೀನನ್ನು 30 ವರ್ಷಗಳ ಕಾಲ ಶ್ರೀ ಸಿಮೆಂಟ್ ಕಂಪನಿಯವರಿಗೆ ಲೀಸ್ಗೆ ನೀಡಲು ಸರ್ಕಾರ ಮುಂದಾಗಿದೆ. ನಿಯಮಗಳ ಪ್ರಕಾರ ಯಾವುದೇ ಕಾರಣಕ್ಕೂ ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ನೀಡಲು ಬರುವುದಿಲ್ಲ. ಈ ಕುರಿತು ಕಲಬುರಗಿ ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಸರ್ಕಾರಕ್ಕೆ ಪತ್ರ ಬರೆದರೂ ಕೂಡ ಸಿದ್ದು ಸರ್ಕಾರ ಸುಮ್ಮನಿಲ್ಲ. ಸಾಕಷ್ಟು ಟ್ಯಾಕ್ಸ್ ಬರುತ್ತದೆ ಎಂಬ ಕಾರಣಕ್ಕೆ ಜಮೀನನ್ನು ಸಿಮೆಂಟ್ ಕಂಪೆನಿಗೆ ‘ಎನ್ಎ’ ಮಾಡಿಕೊಡಿ ಅಂತಾ ಕಂದಾಯ ಇಲಾಖೆಯ ಅಧಿಕಾರಿಗಳು ಡಿಸಿಗೆ ಪತ್ರ ಬರೆದಿದ್ದಾರೆ.
ದುರಂತ ಅಂದ್ರೆ ಈ ಹಿಂದೆ 2010ರಲ್ಲಿ ಇದೇ ಜಮೀನು ವಿವಾದ ಸಂಬಂಧ ಅಂದಿನ ಸಹಾಯಕ ಆಯುಕ್ತರಾಗಿದ್ದ ಡಿಕೆ ರವಿ ಅವರು ಶ್ರೀ ಸಿಮೆಂಟ್ ಕಂಪನಿಯ ಜೊತೆ ಕಾನೂನು ಹೋರಾಟ ನಡೆಸಿ ಜಮೀನನ್ನು ಮುಟ್ಟುಗೋಲು ಹಾಕಿಕೊಂಡಿದ್ರು. ಆದರೆ ಈಗ ಸರ್ಕಾರವೇ ಹಣದಾಸೆಗೆ ನೂರಾರು ಕೋಟಿ ಬೆಲೆ ಬಾಳುವ ಜಮೀನನ್ನು ಖಾಸಗಿ ಸಿಮೆಂಟ್ ಕಾರ್ಖಾನೆಗೆ ನೀಡಲು ಮುಂದಾಗಿದೆ. ಸದ್ಯ ಈ ಪ್ರಕರಣದಿಂದ ಕಲಬುರಗಿ ಜಿಲ್ಲಾಧಿಕಾರಿ ಮತ್ತು ಸರ್ಕಾರದ ನಡುವೆ ಬಿಕಟ್ಟು ಎದುರಾಗಿದೆ.