ಬೆಂಗಳೂರು: ಅರಮನೆಯಲ್ಲಿ ಇದ್ದರೂ ಟೀಕೆ ಕೇಳಬೇಕಾಗುತ್ತದೆ. ರಾಜಕಾರಣದಲ್ಲಿ ಅವೆಲ್ಲ ಸಹಜ. ರಾಜಕೀಯಕ್ಕೆ ಬಂದಾಗ ಜಾಸ್ತಿ ಎದುರಿಸಬೇಕಾಗುತ್ತದೆ ಎಂದು ಮೈಸೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ (Yaduveer Wadiyar) ಹೇಳಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿ ಯಡಿಯೂರಪ್ಪ (BS Yediyurappa) ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಚುನಾವಣೆಯಲ್ಲಿ ಮೈಸೂರು ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುವ ಜವಾಬ್ದಾರಿ ಇದೆ. 9 ವರ್ಷ ಮೈಸೂರಿನ (Mysuru) ಅರಮನೆ ಜವಾಬ್ದಾರಿ ಹೊತ್ತಿದ್ದೇನೆ. ಎಲ್ಲಾ ಸಾರ್ವಜನಿಕ ಜೀವನದಲ್ಲಿ ಭಾಗಿಯಾಗಿದ್ದೇನೆ. ನಾನು ಒಂದು ವರ್ಷದ ಹಿಂದೆಯೇ ತೀರ್ಮಾನ ಮಾಡಿದ್ದೆ. ವೈಯಕ್ತಿಕವಾಗಿ ಕೂಡ ಅಭಿವೃದ್ಧಿ ಮಾಡಬಹುದು. ಆದರೆ ಉತ್ತಮ ಸರ್ಕಾರ ಇದ್ದರೆ ಮತ್ತಷ್ಟು ಅಭಿವೃದ್ಧಿಗೆ ಅನುಕೂಲ ಆಗಲಿದೆ ಎಂದರು. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ 2 ರೂ. ಇಳಿಕೆ
ಮಹಾರಾಜರು ಎಸಿಯಿಂದ ರೋಡ್ಗೆ ಬರಲಿ ಎಂಬ ಸಂಸದ ಪ್ರತಾಪ ಸಿಂಹ (Pratap Simha) ಹೇಳಿಕೆಗೆ ಪ್ರತಿಕ್ರಿಯಿಸಿ, ಎಲ್ಲವನ್ನು ಜೀವನದಲ್ಲಿ ಸ್ವೀಕರಿಸಬೇಕು. ಅರಮನೆಯಲ್ಲಿದ್ದರೆ ಮಾತು ಕೇಳೋದಿಲ್ಲ ಅಂತಲ್ಲ. ಸಾರ್ವಜನಿಕ ಜೀವನದಲ್ಲಿ ಎಲ್ಲವನ್ನೂ ಎದುರಿಸಬೇಕು. ಜನರು ಅವಕಾಶ ಕೊಟ್ಟರೆ ಮೈಸೂರು-ಕೊಡಗು ಅಭಿವೃದ್ಧಿ ಮಾಡುವೆ ಎಂದು ಹೇಳಿದರು. ಇದನ್ನೂ ಓದಿ: ಚುನಾವಣಾ ಬಾಂಡ್ ವಿವರವನ್ನು ಬಹಿರಂಗಪಡಿಸಿದ ಚುನಾವಣಾ ಆಯೋಗ