– ಪಕ್ಷ, ಜನಪ್ರತಿನಿಧಿಗಳು ಜೋಡೆತ್ತುಗಳಂತೆ ಕಾರ್ಯ ನಿರ್ವಹಿಸಬೇಕಿದೆ
ಶಿವಮೊಗ್ಗ: ಕಾಂಗ್ರೆಸ್ ಬಿಟ್ಟ ವೈರಸ್ ನಮ್ಮ ಪಕ್ಷದಲ್ಲಿಯೂ ಬಂದು ಸೇರಿಕೊಂಡಿದೆ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿದ್ದಾರೆ.
ನಗರದಲ್ಲಿ ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೋಡೆತ್ತು ಪದ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ರೀತಿ ಉಪಯೋಗವಾಗಿವೆ. ಆದರೆ ನಾನು ಈ ಪದವನ್ನು ಇಲ್ಲಿ ಬಳಸುತ್ತಿದ್ದೇನೆ. ಪಕ್ಷ ಮತ್ತು ಜನಪ್ರತಿನಿಧಿಗಳು ಜೋಡೆತ್ತು ರೀತಿಯಲ್ಲಿ ಕಾರ್ಯ ನಿರ್ವಹಿಸಿ, ಜನರನ್ನು ಕೊಂಡೊಯ್ಯಬೇಕಿದೆ. ಜನರು ಕೂಡ ಇದನ್ನೇ ಅಪೇಕ್ಷೆ ಪಡುತ್ತಾರೆ ಎಂದರು.
ಜನರು ಜನಪ್ರತಿನಿಧಿ ಯಾರು, ಪಕ್ಷ ಯಾರು ಎಂದು ನೋಡುವುದಿಲ್ಲ. ಬದಲಾಗಿ ಜನರಿಗೆ ಗಾಡಿ ಲಯಬದ್ಧವಾಗಿ ಮುಂದೆ ಸಾಗಬೇಕಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜನಪ್ರತಿನಿಧಿಗಳು ಕರ್ತವ್ಯ ನಿರ್ವಹಿಸಬೇಕಿದೆ. ಮುಂಬರುವ ವಿಧಾನಸಭೆ ಚುನಾವಣೆಗಳ ಸಂದರ್ಭದಲ್ಲಿ ಈಗಿನ ಜಿಲ್ಲಾ ತಂಡ ಇರಲಿದೆಯೋ ಅಥವಾ ಬೇರೆ ತಂಡ ಬರಲಿದೆಯೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಜಿ.ಪಂ. ಮತ್ತು ಗ್ರಾ.ಪಂ. ಚುನಾವಣೆಗಳು ಬರಲಿದೆ. ಆ ಸಂದರ್ಭದಲ್ಲಿ ಹೊಸ ತಂಡಗಳ ಜೊತೆಗೂ ಸೇರಿಕೊಂಡು ನಾವು ಚುನಾವಣೆ ಎದುರಿಸಬೇಕಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಅನೇಕ ಸಮಸ್ಯೆಗಳನ್ನು ಒಂದು ರೀತಿಯ ವೈರಸ್ ರೀತಿಯಲ್ಲಿ ಇಂಜೆಕ್ಟ್ ಮಾಡಿಬಿಟ್ಟಿದೆ. ನೆಹರು ನಂತರ ಬಂದಂತಹ ಕಾಂಗ್ರೆಸ್ ರಾಜಕೀಯ ಪಕ್ಷಗಳಲ್ಲಿ ಅನೇಕ ವೈರಸ್ ಬಿಟ್ಟು, ನಮ್ಮ ದೇಶಕ್ಕೆ ಅತಿ ದೊಡ್ಡ ಅನ್ಯಾಯ ಮಾಡಿದೆ. ಅದು ಎಲ್ಲಾ ಪಾರ್ಟಿಗಳಲ್ಲಿಯೂ ಈಗ ಬಂದು ಸೇರಿಕೊಂಡಿವೆ. ನಮ್ಮ ಪಕ್ಷದಲ್ಲಿಯೂ ಬಂದು ಸೇರಿಕೊಂಡಿವೆ. ವ್ಯಕ್ತಿಗಳಲ್ಲ, ವೈರಸ್ಗಳು ಬಂದು ಸೇರಿಕೊಂಡಿವೆ. ಅವೆಲ್ಲವನ್ನು ನಿವಾರಿಸಿಕೊಂಡು ಪರ್ಯಾಯ ರಾಜಕೀಯ ನೀಡಲು ಆಗುತ್ತಾ ಎಂಬ ಪ್ರಶ್ನೆ ಇದೀಗ ಎದುರಾಗಿದ್ದು, ಇವೆಲ್ಲವನ್ನು ಸರಿದೂಗಿಸಿಕೊಂಡು ಮುನ್ನಡೆಯಬೇಕಿದೆ ಎಂದು ಮಾರ್ಮಿಕವಾಗಿ ಸಂತೋಷ್ ಹೇಳಿದರು.