ಮಂಡ್ಯ: ಸ್ಟಾರ್ ನಟರು ಎಂದರೆ ಕೇವಲ ಫೈಸ್ಟಾರ್ ಹಾಗೂ ಐಷಾರಾಮಿ ಹೊಟೇಲ್ಗಳಲ್ಲಿ ಮಾತ್ರ ಊಟ-ತಿಂಡಿ ಮಾಡುತ್ತಾರೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಇದಕ್ಕೆ ವಿಭಿನ್ನ ಎಂಬಂತೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಶೆಡ್ ಹೊಟೇಲ್ವೊಂದರಲ್ಲಿ ತಿಂಡಿ ತಿನ್ನುವ ಮೂಲಕ ನನಗೂ ಸಾಮಾನ್ಯ ಜನರಂತೆ ಬದುಕಲು ಇಷ್ಟ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.
ಶಿವರಾಜ್ ಕುಮಾರ್ ಅವರು ಎರಡು ದಿನಗಳ ಹಿಂದೆ ಸ್ನೇಹಿತರೊಂದಿಗೆ ಮುತ್ತತ್ತಿಗೆ ಹೋಗುತ್ತಿದ್ದರು. ಆಗ ಮಂಡ್ಯ ಜಿಲ್ಲೆಯ ಮಳವಳ್ಳಿ- ಮದ್ದೂರು ರಸ್ತೆಯಲ್ಲಿ ಕಾರು ನಿಲ್ಲಿಸಿ ಬಾಬು ಶೆಡ್ ಹೊಟೇಲಿನಲ್ಲಿ ಇಡ್ಲಿ, ದೋಸೆ ಹಾಗೂ ಚಿತ್ರಾನ್ನ ತಿಂದಿದ್ದಾರೆ. ಈ ವೇಳೆ ಶಿವರಾಜ್ ಕುಮಾರ್ಗೆ ನಟ ಗುರುದತ್ ಸೇರಿದಂತೆ ಇನ್ನಿತರ ಸ್ನೇಹಿತರು ಕೂಡ ಸಾಥ್ ನೀಡಿದರು.
ಈ ವೇಳೆ ಅಭಿಮಾನಿಗಳು ಶಿವರಾಜ್ಕುಮಾರ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ. 40 ವರ್ಷಗಳಿಂದ ಬಾಬು ಅವರು ಈ ಶೆಡ್ ಹೊಟೇಲ್ ನಡೆಸುತ್ತಿದ್ದು, ಮಳವಳ್ಳಿ ಭಾಗದಲ್ಲಿ ಈ ಹೊಟೇಲ್ ಫುಲ್ ಫೇಮಸ್ ಆಗಿದೆ.
ಬಳಿಕ ಮಾತನಾಡಿದ ಶಿವಣ್ಣ, ಈ ಭಾಗದಲ್ಲಿ ನಾನು ಹೋಗುವಾಗ ಇಲ್ಲಿಗೆ ಬಂದು ಊಟ-ತಿಂಡಿ ಮಾಡುತ್ತೇನೆ. ಇಲ್ಲಿ ಇಡ್ಲಿ, ದೋಸೆ ಹಾಗೂ ಚಿತ್ರಾನ್ನ ಸೂಪರ್ ಆಗಿ ಇರುತ್ತದೆ. ಹಲಗೂರಿನ ಭಾಗದಲ್ಲಿ ನಮಗೆ ಸಂಬಂಧಿಕರು ಇದ್ದಾರೆ. ಇದರಿಂದ ಈ ಹೊಟೇಲ್ ನನಗೆ ಹಳೆಯ ಪರಿಚಯ ಎಂದು ಹೇಳಿದರು.
ಈ ಹಿಂದೆಯೂ ಕೂಡ ಶಿವಣ್ಣ ಸಾಕಷ್ಟು ಬಾರಿ ಮಂಡ್ಯ ಹಾಗೂ ಚಾಮರಾಜನಗರ ಭಾಗದಲ್ಲಿ ಹಲವು ಶೆಡ್ ಹೊಟೇಲ್ಗಳಿಗೆ ಹೋಗಿ ಊಟ, ತಿಂಡಿ ಸವಿದಿದ್ದಾರೆ.