ಉಡುಪಿ: ಇಲ್ಲಿನ ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ರಾಜಕೀಯಕ್ಕೆ ಎಂಟ್ರಿ ಕೊಡುವುದಾಗಿ ಘೋಷಣೆ ಮಾಡಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ವಾಮೀಜಿ, ಉಡುಪಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ ಅವರು, ಬಿಜೆಪಿಯಿಂದ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಅಂತ ಹೇಳಿದ್ದಾರೆ.
ಉಡುಪಿಯ ರಾಜಕೀಯ ವ್ಯವಸ್ಥೆ ಸರಿಯಿಲ್ಲ. ಹೀಗಾಗಿ ಸಕ್ರೀಯ ರಾಜಕಾರಣಕ್ಕೆ ಬರುವ ಮನಸ್ಸು ಮಾಡಿದ್ದೇನೆ. ವ್ಯವಸ್ಥೆಗಳು ಸರಿ ಇರುತ್ತಿದ್ದರೆ ಈ ನಿರ್ಧಾರ ಮಾಡುತ್ತಿರಲಿಲ್ಲ. ಪಕ್ಷೇತರನಾಗಿ ನಿಲ್ಲಬೇಕೆಂಬು ಎನ್ನುವುದು ನನ್ನ ಮನಸ್ಸು. ಕಳೆದ 15 ದಿನಗಳಿಂದ ಚಿಂತನೆ ಮಾಡಿ ಈ ನಿರ್ಧಾರಕ್ಕೆ ಬಂದಿದ್ದೇನೆ ಅಂದ್ರು.
ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಗಳ ದರ್ಪ, ದೌಲತ್ತುಗಳು ಜಾಸ್ತಿಯಾಗಿದೆ. ರಾಜಕೀಯ ಕೂಡಾ ಜನಪರವಾಗಿಲ್ಲ. ಈ ಕಾರಣದಿಂದ ರಾಜಕೀಯಕ್ಕೆ ಬರುವ ಮನಸ್ಸು ಮಾಡಿದ್ದೇನೆ. ಸ್ವಾಮೀಜಿಗಳಿಗೆ ರಾಜಕೀಯ ಯಾಕೆ ಬೇಕು ಅಂತ ಜನ, ಮಾಧ್ಯಮಗಳು ಕೇಳಬಹುದು. ರಾಜಕೀಯದಲ್ಲಿ ಧರ್ಮ ಇರಬೇಕು. ಅದು ನಾಶವಾಗಿದೆ. ಎಲ್ಲಿ ಧರ್ಮ ಇಲ್ಲವೋ, ಅಧರ್ಮ ಇದೆಯೋ ಅಲ್ಲಿಗೆ ಮಠಾಧೀಶರು ಬರಬೇಕು. ಸಮಸ್ಯೆಗಳನ್ನು ಸರಿ ಮಾಡಬೇಕು ಎಂದರು.
ಬಡವರಿಗೆ, ದೀನರಿಗೆ ಜಿಲ್ಲೆಯಲ್ಲಿ ಬಹಳ ಸಮಸ್ಯೆಯಾಗಿದೆ. ಅದನ್ನೆಲ್ಲಾ ನೋಡಿ ನೋಡಿ ಬೇಸರಗೊಂಡಿದ್ದೇನೆ. ಕಷ್ಟದಲ್ಲಿರುವವರಿಗೆ ನನ್ನ ಕೈಲಾದ ಎಲ್ಲಾ ಸಹಾಯಗಳನ್ನು ಮಾಡುತ್ತಾ ಬಂದಿದ್ದೇನೆ. ಮುಂದೆ ಹೆಚ್ಚು ಹೆಚ್ಚು ಸಹಾಯ ಮಾಡಬೇಕಾದರೆ ರಾಜಕೀಯ ಶಕ್ತಿ ಬೇಕು. ಬಿಜೆಪಿಯಿಂದ ಟಿಕೆಟ್ ಸಿಕ್ಕರೆ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತೇನೆ. ಟಿಕೆಟ್ ಕೊಡಿ ಅಂತ ಆಕಾಂಕ್ಷೆ ವ್ಯಕ್ತಪಡಿಸುವುದಿಲ್ಲ. ಪಕ್ಷೇತರನಾಗಿಯೇ ಸ್ಪರ್ಧೆ ಮಾಡಬೇಕು. ಕೇಂದ್ರ ಬಿಜೆಪಿಯ ಆಡಳಿತ ಚೆನ್ನಾಗಿದೆ. ಈ ಉದ್ದೇಶದಿಂದ ಬಿಜೆಪಿ ಬಗ್ಗೆ ಒಲವಿದೆ ಅಂತ ಹೇಳಿದ್ರು.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲೇ ಸ್ಪರ್ಧೆ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇನೆ. ಸಚಿವ ಪ್ರಮೋದ್ ಮಧ್ವರಾಜ್ ಹಲವಾರು ಕೆಲಸ ಮಾಡಿದ್ದಾರೆ. ಅವರಿಗೆ ವಿರುದ್ಧ ನನ್ನ ಸ್ಪರ್ಧೆ ಅಲ್ಲ. ಜನಕ್ಕೋಸ್ಕರ ಕೆಲಸ ಮಾಡಬೇಕು. ಹೀಗಾಗಿ ರಾಜಕೀಯ ಪ್ರವೇಶ ಮಾಡಲು ನಿರ್ಧರಿಸಿದ್ದೇನೆ. ಇನ್ನು ಯೋಗಿ ಆದಿತ್ಯನಾಥ್ ನನಗೆ ಮಾದರಿ. ಅವರು ಉತ್ತರ ಪ್ರದೇಶ ಸಿಎಂ ಆಗಿ ಆಯ್ಕೆ ಆದ ನಂತರ ಬಹಳ ಬದಲಾವಣೆಯಾಗಿದೆ. ಅವರ ಕೆಲಸ ನಮಗೆ ಮಾದರಿ. ಖಾವಿ ತೊಟ್ಟವರ ರಾಜಕೀಯದ ನಾಂದಿ ಹಾಡಿದ್ದಾರೆ. ಕೇಸರಿ ಬಟ್ಟೆಗೆ ಮತ್ತಷ್ಟು ಗೌರವವನ್ನು ತಂದು ಕೊಟ್ಟಿದ್ದಾರೆ. ಅವರಂತೆ ಕೆಲಸ ಮಾಡಬೇಕೆಂಬ ಹಂಬಲವಿದೆ. ಹಿತೈಷಿಗಳು, ಭಕ್ತರು, ಆಪ್ತರ ಜೊತೆಯೆಲ್ಲಾ ಚರ್ಚೆ ಮಾಡಿದ್ದೇನೆ. ಸಾಧಕ ಬಾಧಕಗಳ ಬಗ್ಗೆಯೂ ವಿಮರ್ಶೆಗಳು ಆಗಿದೆ ಎಂದು ಸ್ವಾಮೀಜಿ ಹೇಳಿದರು.