ಮುಂಬೈ: ದೆಹಲಿಯನ್ನು ಕೋಮುಗಲಭೆಗಳಿಂದ ರಕ್ಷಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಾಧ್ಯವಿಲ್ಲ ಎಂದು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನುಮ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ದೆಹಲಿಯ ಜಹಾಂಗೀರ್ಪುರಿಯಲ್ಲಿ ನಡೆದ ಹಿಂಸಾಚಾರವನ್ನು ಕೇಂದ್ರ ಸಚಿವ ಅಮಿತ್ ಶಾ ಅವರು ಸಮರ್ಥವಾಗಿ ನಿರ್ವಹಿಸಿಲ್ಲ ಎಂದು ಕಿಡಿಕಾರಿದರು.
ಕೆಲವು ದಿನಗಳ ಹಿಂದೆ ಕೋಮು ಗಲಭೆಯಿಂದಾಗಿ ದೆಹಲಿ ಹೊತ್ತಿ ಉರಿದಿತ್ತು. ಆ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗಲಭೆಯನ್ನು ನಿಯಂತ್ರಿಸಿದರು. ಆದರೆ ಅದರ ಪೊಲೀಸರು ಅಮಿತ್ ಶಾ ನಿರ್ವಹಿಸುವ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಇದರಿಂದಾಗಿ ಕೋಮು ಗಲಭೆಗಳಿಂದ ನಗರವನ್ನು ರಕ್ಷಿಸಲು ಅಮಿತ್ ಶಾ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದೆಹಲಿಯಲ್ಲಿ ಏನಾದರೂ ಸಂಭವಿಸಿದರೆ ಅದರ ಸಂದೇಶವು ಜಗತ್ತಿಗೆ ಹೋಗುತ್ತದೆ. ಈ ರೀತಿಯ ಗಲಾಟೆಗಳು ನಡೆಯುವುದರಿಂದ ದೆಹಲಿಯಲ್ಲಿ ಅಶಾಂತಿ ಇದೆ ಎಂದು ಊಹಿಸುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಅಮಿತ್ ಶಾ ಅವರಿಗೆ ಅಧಿಕಾರವಿದೆ. ಆದರೆ ದೆಹಲಿಯನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಮುಸ್ಲಿಮರನ್ನು ಕಂಡಾಕ್ಷಣ ಪಾಕಿಸ್ತಾನದವರು, ಉಗ್ರಗಾಮಿಗಳು ಎನ್ನುವುದು ಸರಿಯಲ್ಲ: ಮಾಜಿ ಸಚಿವ ಈಶ್ವರಪ್ಪ
ಕರ್ನಾಟಕದಲ್ಲಿ ನಡೆಯುತ್ತಿರುವ ವಿವಾದಗಳ ಕುರಿತು ಪ್ರತಿಕ್ರಿಯಿಸಿದ ಅವರು, ಅಲ್ಪಸಂಖ್ಯಾತ ಸಮೂದಾಯದ ಅಂಗಡಿಗಳಿಂದ ವಸ್ತಗಳನ್ನು ಖರೀದಿಸಬಾರದು ಎಂದು ನಾಮಫಲಕವನ್ನು ಹಾಕಲಾಗಿತ್ತು. ಈ ರೀತಿಯ ವಿವಾದಗಳು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕಾಣಬಹುದಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹೆಜ್ಜೇನು ದಾಳಿಗೆ ಕಾಫಿ ಮಂಡಳಿ ಮಾಜಿ ಅಧ್ಯಕ್ಷ, ಬಿಜೆಪಿ-ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ, ವಿಧಿವಶ