ದಾವಣಗೆರೆ: ಬಿಜೆಪಿ ಅವರು ಜಿಂದಾಲ್ ವಿರುದ್ಧ ಪಾದಯಾತ್ರೆ ಮಾಡಲಿ, ಅವರಿಗೆ ಯಾವುದಾದರೂ ರೋಗವಿದ್ದರೆ ದೂರವಾಗುತ್ತವೆ ಎಂದು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಕಮಲ ನಾಯಕರನ್ನು ಟೀಕಿಸಿದ್ದಾರೆ.
ಜಿಂದಾಲ್ ವಿರುದ್ಧ ಬಿಜೆಪಿ ಪಾದಯಾತ್ರೆ ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವರು ಪಾದಯಾತ್ರೆ ಮಾಡಲಿ ಯಾರು ಬೇಡ ಅನ್ನುತ್ತಾರೆ. ಅವರಿಗೇನಾದರೂ ರೋಗವಿದ್ದರೆ ಪಾದಯಾತ್ರೆ ಮಾಡುವುದರಿಂದ ದೂರವಾಗುತ್ತೆ ಬಿಡಿ ಎಂದು ಬಿಜೆಪಿ ಅವರ ಕಾಲೆಳೆದಿದ್ದಾರೆ.
ಅಲ್ಲದೆ ಜಿಂದಾಲ್ ಕಂಪನಿಗೆ ಸರ್ಕಾರ ಭೂಮಿ ನೀಡುವ ಬಗ್ಗೆ ಮಾತನಾಡಿ, ಇದು ಹಿಂದೆ ಇದ್ದ ಬಿಜೆಪಿಯವರ ಕಾಲದಲ್ಲಿ ಆಗಿರೋದು. ಜೆಡಿಎಸ್, ಕಾಂಗ್ರೆಸ್ಸಿನವರು ಮಾಡಿರೋದಲ್ಲ. ಈ ಬಗ್ಗೆ ಪರಾಮರ್ಶೆಗೆ ಸಂಪುಟ ಉಪಸಮಿತಿ ರಚಿಸಲಾಗಿದೆ. ಉಪಸಮಿತಿಯಲ್ಲಿ ಎಲ್ಲರು ಹಿರಿಯರು ಇದ್ದಾರೆ. ಅವರೇ ಈ ಬಗ್ಗೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಬಳಿಕ ಲಿಂಗಾಯತ, ವೀರಶೈವ ಎರಡು ಒಂದೆ ಎಂದು ನಾವು ಹೇಳುತ್ತೇವೆ. ಆದರೆ ಲಿಂಗಾಯತ ಬೇರೆ ವೀರಶೈವ ಬೇರೆ ಎನ್ನುವವರು ಅವರಿಗೆ ಎಲ್ಲಿ ನ್ಯಾಯ ಸಿಗತ್ತೋ ಅಲ್ಲೇ ಹೋಗಲಿ ಎಂದು ಹೇಳಿದರು.