ಬೆಂಗಳೂರು: ಮಕ್ಕಳ ಶಾಲಾ ಶುಲ್ಕ ಪಾವತಿಸಲು ಸರ್ಕಾರ ಸಹಾಯ ಮಾಡಬೇಕೆಂದು ಆಮ್ ಆದ್ಮಿ ಪಾರ್ಟಿ ಆಯೋಜಿಸಿದ್ದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ನೂರಾರು ಪೋಷಕರು ಆಗ್ರಹಿಸಿದ್ದಾರೆ.
ಕಳೆದ ಒಂದೂವರೆ ವರ್ಷಗಳಲ್ಲಿ ಲಾಕ್ಡೌನ್ನಿಂದಾಗಿ ಆದಾಯ ಹಾಗೂ ಉಳಿತಾಯವನ್ನು ಕಳೆದುಕೊಂಡು ಪೋಷಕರು ಸಂಕಷ್ಟದಲ್ಲಿದ್ದಾರೆ. ಈಗ ಸರ್ಕಾರವು ಅವರಿಗೆ ಸಹಾಯ ಮಾಡದಿದ್ದರೆ ಅನೇಕರಿಗೆ ತಮ್ಮ ಮಕ್ಕಳನ್ನು ಮರಳಿ ಶಾಲೆಗೆ ಕಳುಹಿಸಲು ಸಾಧ್ಯವಾಗುವುದಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡರು. ಪತಿ ಹಾಗೂ ತಂದೆಯನ್ನು ಕಳೆದುಕೊಂಡಿರುವ ನಾನು ಇಬ್ಬರು ಮಕ್ಕಳನ್ನು ಓದಿಸಲು ಹಲವು ಮನೆಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಲಾಕ್ಡೌನ್ನಿಂದಾಗಿ ನನಗೆ ಒಂದೂವರೆ ವರ್ಷ ಉದ್ಯೋಗವಿರಲಿಲ್ಲ. ನಾನು ಮಕ್ಕಳ ಶಾಲಾ ಶುಲ್ಕ ಪಾವತಿಸಲು ಹೇಗೆ ಸಾಧ್ಯ? ಎಂದು ಪೋಷಕರಾದ ಪವಿತ್ರ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ಕೆ.ಆರ್.ರಮೇಶ್ ಕುಮಾರ್, ಪೋಷಕರಿಗೆ ನೆರವಾಗಲು ಸರ್ಕಾರ ಏನನ್ನಾದರೂ ಮಾಡಲೇ ಬೇಕು. ದೀರ್ಘಾವಧಿಯಲ್ಲಿ, ಸರ್ಕಾರಿ ಶಾಲೆಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದರು. ಇದನ್ನೂ ಓದಿ: ಬಸ್ನಲ್ಲಿ ನಿದ್ದೆ ಮಾಡುವ ಅಭ್ಯಾಸ ಇದೆಯೇ?- ಈ ಸುದ್ದಿ ಓದಿ
ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಮಾತನಾಡಿ, ಕಾನೂನಿನ ಪ್ರಕಾರ ಗುಣಮಟ್ಟದ ಹಾಗೂ ಉಚಿತ ಶಿಕ್ಷಣ ಪಡೆಯುವ ಹಕ್ಕನ್ನು ಮಕ್ಕಳು ಹೊಂದಿದ್ದಾರೆ. ಆದರೆ ಬಿಜೆಪಿ ಸರ್ಕಾರವು ಈ ಸಂಕಷ್ಟದ ಸಮಯದಲ್ಲಿ ಪೋಷಕರಿಗೆ ನೆರವಾಗಲು ನಿರ್ಲಕ್ಷ್ಯ ತೋರುತ್ತಿದೆ. ಅವರ ಬೇಡಿಕೆಗಳನ್ನು ಕೇಳಿ ನೆರವಾಗಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮಳೆಗಾಗಿ ಭಕ್ತನಿಂದ ಆಂಜನೇಯನಿಗೆ ಪ್ರಾರ್ಥನೆ – ಹೂ ಪ್ರಸಾದ ನೀಡಿದ ಹನುಮಂತ
ಬೆಂಗಳೂರು ನಗರದ ಎಎಪಿ ಅಧ್ಯಕ್ಷರಾದ ಮೋಹನ್ ದಾಸರಿ ಮಾತನಾಡಿ, ಇಲ್ಲಿ ಕೇಳಿಬಂದ ಪೋಷಕರ ಬೇಡಿಕೆಗಳನ್ನು ನಾವು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ರವರಿಗೆ ತಲುಪಿಸುತ್ತೇವೆ. ಹಾಗೂ ಶಾಲಾ ಶುಲ್ಕಕ್ಕೆ ಸಂಬಂಧಿಸಿ ಪೋಷಕರಿಗೆ ನೆರವಾಗುವಂತಹ ವಿಸ್ತೃತ ಯೋಜನೆಯನ್ನು ಶೀಘ್ರದಲ್ಲೇ ರೂಪಿಸಬೇಕು ಹಾಗೂ ಪರಿಣಾಮಕಾರಿಯಾದ ಶಾಲಾ ನಿರ್ವಹಣಾ ಸಮಿತಿಗಳನ್ನು ರಚಿಸಬೇಕೆಂದು ಆಗ್ರಹಿಸುತ್ತೇವೆ. ದೆಹಲಿಯ ಎಎಪಿ ಸರ್ಕಾರವು ಅಲ್ಲಿನ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದ ಮಾದರಿಯಲ್ಲೇ ಇಲ್ಲೂ ಕೂಡ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.
ಪೋಷಕರ ಸಂಘಟನೆಗಳು, ಸಮನ್ವಯ ಸಮಿತಿ ಹಾಗೂ ವಾಯ್ಸ್ ಆಫ್ ಪೇರೆಂಟ್ಸ್ ಸಂಘಟನೆಗಳು ಸರ್ಕಾರವು ನೆರವು ನೀಡದಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದವು. ತಮಗೆ ಬೆಂಬಲವಾಗಿರುವ ಎಎಪಿಯನ್ನು ಪೋಷಕರು ಶ್ಲಾಘಿಸಿದರು.