– ರಾಜೀನಾಮೆ ಹಿಂದಿದೆ ಷಡ್ಯಂತ್ರ
ಮಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಪುತ್ರರ ಕಿರುಕುಳದಿಂದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಆರೋಪಿಸಿದ್ದಾರೆ.
ಸಸಿಕಾಂತ್ ರಾಜೀನಾಮೆ ನೀಡಿರುವ ವಿಷಯ ತಿಳಿಯುತ್ತಿದ್ದಂತೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಹರೀಶ್ ಕುಮಾರ್, ಬಿಜೆಪಿ ಸರ್ಕಾರದ ಕಿರುಕುಳ ಮತ್ತು ಒತ್ತಡದಿಂದ ಸಸಿಕಾಂತ್ ರಾಜೀನಾಮೆ ನೀಡಿದ್ದಾರೆ. ಸಿಎಂ ಮತ್ತು ಪುತ್ರರು ಅಧಿಕಾರಿಗಳ ವರ್ಗಾವಣೆ ದಂಧೆ ಮಾಡುತ್ತಿದ್ದಾರೆ. ಇದೇ ಸರ್ಕಾರ ಮುಂದುವರಿದ್ರೆ ಕೇವಲ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಅಲ್ಲದೇ ಕೆಳವರ್ಗದ ನೌಕರರು ರಾಜಿನಾಮೆ ನೀಡುವ ಪರಿಸ್ಥಿತಿ ಬರಲಿದೆ. ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿರುವ ಸರ್ಕಾರ ಸುಸ್ಥಿತ ಆಡಳಿತ ನೀಡುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು.
ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಮಾತನಾಡಿ, ಸಸಿಕಾಂತ್ ಸೆಂಥಿಲ್ ಕಾರಣವಿಲ್ಲದೇ ರಾಜೀನಾಮೆ ನೀಡುವಂತಹ ಅಧಿಕಾರಿ ಅಲ್ಲ. ಒಬ್ಬ ಐಎಎಸ್ ಅಧಿಕಾರಿ ರಾಜೀನಾಮೆ ನೀಡಿರುವ ಹಿಂದೆ ಒಂದು ಷಡ್ಯಂತ್ರವಿರುವ ಅನುಮಾನಗಳಿವೆ. ಓರ್ವ ಐಎಎಸ್ ಅಧಿಕಾರಿ ಯಾಕೆ ರಾಜೀನಾಮೆ ನೀಡಿದ್ರು ಎಂಬ ವಿಷಯವನ್ನು ಮುಖ್ಯಮಂತ್ರಿಗಳು ರಾಜ್ಯದ ಜನತೆ ತಿಳಿಸಬೇಕು. ಸೆಂಥಿಲ್ ಜಿಲ್ಲೆಯಲ್ಲಿ ಡ್ರಗ್ ಮಾಫಿಯಾ ಸೇರಿದಂತೆ ಹಲವು ಅವ್ಯವಹಾರಗಳನ್ನು ತಡೆದಿದ್ದರು. ಏಕಚಕ್ರಾಧಿಪತ್ಯ ಹೊಂದಿರುವ ಬಿಜೆಪಿ ಸರ್ಕಾರ ಮರಳು ದಂಧೆಗೆ ಮುಂದಾಗಿತ್ತು. ತಮಗೆ ಸಂಬಂಧಿಸಿದ ಜನರಿಗೆ ಮರಳು ದಂಧೆಗೆ ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ತಂದಿದ್ದರು ಎಂದು ಆರೋಪಿಸಿದರು. ಇದನ್ನೂ ಓದಿ: ಅಕ್ರಮ ಮರಳು ದಂಧೆಗೆ ಸಸಿಕಾಂತ್ ಸೆಂಥಿಲ್ ಬಲಿ?
ದೇಶದ ಪ್ರಜಾಪ್ರಭುತ್ವ ಗಂಡಾಂತರದಲ್ಲಿದೆ. ನಾನು ಹೊಂದಾಣಿಕೆ ಮತ್ತು ಅನೈತಿಕ ಕಾರ್ಯಗಳಲ್ಲಿ ಭಾಗಿಯಾಗಲು ಇಷ್ಟಪಡಲ್ಲ. ಮನಸ್ಸಿಗೆ ಒಪ್ಪದ ವಿಚಾರಗಳಿಗೆ ಅಡ್ಜಸ್ಟ್ ಮಾಡಿಕೊಳ್ಳದೇ ರಾಜೀನಾಮೆ ನೀಡುತ್ತಿದ್ದೇನೆ. ರಾಜೀನಾಮೆ ನೀಡಿ ಓರ್ವ ಸಾಮಾನ್ಯ ವ್ಯಕ್ತಿಯಾಗಿ ಹೋರಾಟ ಮಾಡುತ್ತೇನೆ ಎಂದು ಸೆಂಥಿಲ್ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಸೆಂಥಿಲ್ ಮರಳು ಮಾಫಿಯಾಗೆ ಬಲಿಯಾಗಿದ್ದು, ಮುಖ್ಯಮಂತ್ರಿಗಳು ಅಧಿಕಾರಿಯ ಮನವೊಲಿಸಿ ರಾಜೀನಾಮೆ ಹಿಂಪಡೆಯುವಂತೆ ಮಾಡಬೇಕೆಂದು ಐವಾನ್ ಡಿಸೋಜ ಆಗ್ರಹಿಸಿದರು. ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ದಿಢೀರ್ ರಾಜಿನಾಮೆ