ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹ ಅವ್ಯವಹಾರಗಳ ಅಡ್ಡೆ ಆಗಿದ್ದು, ಇದೀಗ ಜೈಲು ಉಪ ನಿರೀಕ್ಷಕಿ ಡಿ. ರೂಪ ಜೈಲಿನ ಅಕ್ರಮಗಳನ್ನು ಬಯಲಿಗೆಳೆದಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಅರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಜಯಲಲಿತಾ ಆಪ್ತೆ ಶಶಿಕಲಾಗೆ ಪರಪ್ಪನ ಅಗ್ರಹಾರದಲ್ಲಿ ರಾಯಲ್ ಟ್ರೀಟ್ಮೆಂಟ್ ನೀಡಲಾಗುತ್ತಿದ್ದು, ಇದಕ್ಕಾಗಿ ಕಾರಾಗೃಹ ಮಹಾ ನಿರ್ದೇಶಕ ಸತ್ಯನಾರಾಯಣ್ ಗೆ 2 ಕೋಟಿ ಲಂಚ ನೀಡಿರುವುದಾಗಿ ಆರೋಪಿಸಲಾಗಿದೆ.
ಲಂಚ ಪಡೆದು ಶಶಿಕಲಾಗೆ ಜೈಲಿನಲ್ಲಿ ರಾಯಲ್ ಟ್ರೀಟ್ಮೆಂಟ್ ನೀಡುವುದರ ಜೊತೆಗೆ ಪ್ರತ್ಯೇಕ ಅಡುಗೆ ಮನೆಯನ್ನು ನಿರ್ಮಿಸಿಕೊಡಲಾಗಿದೆ ಎಂದು ರೂಪ ರವರು ನೀಡಿರುವ ವರದಿಯಲ್ಲಿ ಉಲ್ಲೇಖವಾಗಿದೆ. ಇಷ್ಟೇ ಅಲ್ಲದೆ ಛಾಪಾಕಾಗದ ಹಗರಣದ ಅರೋಪಿ ಅಬ್ದುಲ್ ಕರೀಂ ಲಾಲ್ ತೆಲಗಿಗೆ ಸೇವೆ ಮಾಡಲು ಕೈಗೊಬ್ಬ, ಕಾಲಿಗೊಬ್ಬ ಕೈದಿಗಳನ್ನು ಇರಿಸಲಾಗಿದೆ.
ಇದರ ಜೊತೆಗೆ ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ ಸೇರಿದಂತೆ ಎಲ್ಲಾ ತರಹದ ಮಾದಕ ವಸ್ತುಗಳು ಸಪ್ಲೈ ಆಗುತ್ತಿದ್ದು ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ 18 ಕೈದಿಗಳನ್ನು ಡ್ರಗ್ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟೀವ್ ರಿಪೋರ್ಟ್ ಬಂದಿದೆ.
ಈ ವೇಳೆ ವಿಚಾರಣಧೀನ ಕೈದಿಯೊರ್ವ ನರ್ಸ್ ಜೊತೆ ಅನುಚಿತ ವರ್ತನೆ ನಡೆಸಿದ್ದಾನೆ ಎನ್ನಲಾಗಿದೆ. ಜೈಲು ಉಪ ನಿರೀಕ್ಷಕಿ ರೂಪರವರು ಇದೇ ತಿಂಗಳ 10ರಂದು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಎಲ್ಲಾ ಅವ್ಯವಹಾರಗಳು ಬೆಳಕಿಗೆ ಬಂದಿವೆ. ರೂಪ ರವರು ಹಿರಿಯ ಅಧಿಕಾರಿಗಳಿಗೆ ನೀಡಿರುವ ವರದಿಯಿಂದ ಈ ಎಲ್ಲಾ ಅಕ್ರಮಗಳು ಬಹಿರಂಗವಾಗಿವೆ.