ಕಠ್ಮಂಡು: ಟಿಬೆಟ್-ನೇಪಾಳ (Nepal Flood) ಗಡಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಭಾರೀ ಅನಾಹುತ ಸಂಭವಿಸಿದೆ. ದುರಂತದ ಬಳಿಕ ಕೈಲಾಸ ಯಾತ್ರೆಗೆ (Kailash Yatra) ತೆರಳಿದ್ದ ಇಶಾ ಫೌಂಡೇಶನ್ನ (Isha Foundation) 77 ಸದಸ್ಯರು ಇನ್ನೂ ಪತ್ತೆಯಾಗಿಲ್ಲ ಎಂದು ಸದ್ಗುರು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಟಿಬೆಟ್ನಲ್ಲಿರುವ ಸದ್ಗುರು, ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳಲು ಪ್ರಯತ್ನಿಸಿದ್ದರು. ಆದರೆ, ಭಾರೀ ಹಾನಿಯಿಂದಾಗಿ ಅಲ್ಲಿಗೆ ಸಂಪರ್ಕಿಸುವ ಎಲ್ಲಾ ರಸ್ತೆಗಳು ಬಂದ್ ಆಗಿದ್ದರಿಂದ ಅವರು ವಾಪಸ್ ಬರಬೇಕಾಯಿತು ಎಂದು ತಿಳಿಸಿದ್ದಾರೆ.
ಟಿಬೆಟ್ ಮತ್ತು ನೇಪಾಳ ಗಡಿ ಭಾಗದಲ್ಲಿ ಪ್ರವಾಹದ ತೀವ್ರತೆ ಹೆಚ್ಚಾಗಿದೆ. ದೂರವಾಣಿ ಸಂಪರ್ಕ ಹಾಗೂ ಇತರ ಸಂಪರ್ಕ ವ್ಯವಸ್ಥೆಗಳು ಕಡಿತಗೊಂಡಿರುವುದರಿಂದ ಟಿಬೆಟಿಯನ್ ಭಾಗದಿಂದ ಇನ್ನೂ ಸಂಪೂರ್ಣ ಮಾಹಿತಿ ಸಿಗುತ್ತಿಲ್ಲ ಎಂದು ಸದ್ಗುರು ತಿಳಿಸಿದ್ದಾರೆ.
ನಾಪತ್ತೆಯಾಗಿರುವ ಯಾತ್ರಿಕರಲ್ಲಿ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್ಡಮ್ ಸೇರಿದಂತೆ ಹಲವು ದೇಶದ ಜನರು ಇದ್ದಾರೆ. ಈ ತಂಡದಲ್ಲಿ 34 ಪುರುಷರು ಮತ್ತು 46 ಮಹಿಳೆಯರು ಸೇರಿದಂತೆ ಒಟ್ಟು 80 ಮಂದಿ ಇದ್ದರು ಎಂದು ಸದ್ಗುರು ಮಾಹಿತಿ ನೀಡಿದ್ದಾರೆ.
ಸುಮಾರು ಒಂದು ವಾರದ ಹಿಂದೆ ವಲಸಿಗರು ಬಳಸುತ್ತಿದ್ದ ಕಟ್ಟಡಗಳು ಹಾಗೂ ಸುತ್ತಮುತ್ತಲಿನ ಪ್ರದೇಶ ಪ್ರವಾಹದಲ್ಲಿ ಕೊಚ್ಚಿಹೋಗಿದೆ. ಅಲ್ಲಿನ ಪರಿಸ್ಥಿತಿ ನೋಡಿದರೆ ದುರಂತದ ಪ್ರಮಾಣ ದೊಡ್ಡದಾಗಿರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನೇಪಾಳ ಪ್ರವಾಸಕ್ಕೆ ಹೋಗಿದ್ದ ಹಾವೇರಿಯ 6 ಕುಟುಂಬಗಳು ಸುರಕ್ಷಿತ
ತಮ್ಮ ತಂಡವು ನೇಪಾಳದಲ್ಲಿರುವ ಚೀನಾ ಮತ್ತು ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿದೆ. ರಕ್ಷಣಾ ತಂಡದೊಂದಿಗೆ ಸ್ಥಳಕ್ಕೆ ತೆರಳಲು ಅಗತ್ಯ ಅನುಮತಿ ಪಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಪ್ರಕಾರ, ಇದುವರೆಗೆ 165 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. 44 ನೇಪಾಳ ಸೇನಾ ಸಿಬ್ಬಂದಿ, 28 ಪೊಲೀಸ್ ಸಿಬ್ಬಂದಿ ಮತ್ತು 13 ಸಶಸ್ತ್ರ ಪೊಲೀಸ್ ಸಿಬ್ಬಂದಿ ಕೂಡ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳ ಪ್ರವಾಸೋದ್ಯಮ ಮಂಡಳಿಯ ಪ್ರಾಥಮಿಕ ಮಾಹಿತಿಯಂತೆ 579 ಪ್ರಯಾಣಿಕರು ನಾಪತ್ತೆಯಾಗಿದ್ದು, ಅವರಲ್ಲಿ 466 ಮಂದಿ ವಿದೇಶಿಯರು ಮತ್ತು 113 ಮಂದಿ ನೇಪಾಳದವರು ಎಂದು ತಿಳಿದುಬಂದಿದೆ. ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದ್ದು, ನಾಪತ್ತೆಯಾಗಿರುವವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ನೇಪಾಳ ಜಲಪ್ರಳಯ – ಮುಂದಿನ 24 ಗಂಟೆ ಬಿಹಾರ, ಯುಪಿ, ಉತ್ತರಾಖಂಡದಲ್ಲಿ ಪ್ರವಾಹದ ಹೈಅಲರ್ಟ್
