ಪುನೀತ್ ರಾಜ್ ಕುಮಾರ್ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಡಾಕ್ಯುಮೆಂಟರಿ ಪ್ರಿ ರಿಲೀಸ್ ಇವೆಂಟ್ ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು. ಭಾರತೀಯ ಸಿನಿಮಾ ರಂಗದ ಅನೇಕ ಕಲಾವಿದರು ಇದರಲ್ಲಿ ಭಾಗಿಯಾಗಿದ್ದರು. ಆದರೆ, ರಿಷಬ್ ಶೆಟ್ಟಿ (Rishabh Shetty) ಗೈರು ಹಾಜರಿದ್ದರು. ಹಾಗಂತ ಅವರು ಬೇಕು ಅಂತ ಈ ಕಾರ್ಯಕ್ರಮದಿಂದ ತಪ್ಪಿಸಿಕೊಂಡಿಲ್ಲ. ಈ ದೇಶದಲ್ಲೂ ಅವರಿಲ್ಲ. ಹಾಗಾಗಿ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ. ಕ್ಷಮೆ ಕೂಡ ಕೇಳಿದ್ದಾರೆ.
ಪುನೀತ ಪರ್ವ (Puneetha Parva) ಕಾರ್ಯಕ್ರಮಕ್ಕೆ ಯಾಕೆ ಹಾಜರಾಗುತ್ತಿಲ್ಲ ಎನ್ನುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದಿರುವ ರಿಷಬ್ ‘ಪೂರ್ವನಿರ್ಧರಿತ ಕಾರ್ಯಕ್ರಮವೊಂದಕ್ಕಾಗಿ ಬರ್ಹೇನ್ ನಲ್ಲಿರುವ ಕಾರಣ ಇಂದಿನ ಪುನೀತ ಪರ್ವದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಕಾರ್ಯಕ್ರಮದ ಲೈವ್ ನೋಡುತ್ತಾ ಕಣ್ತುಂಬಿ ಬಂದವು. ನಾನೂ ಅಲ್ಲಿ ಆ ನೆನಪುಗಳ ನಡುವೆ ಇರಬೇಕಿತ್ತು ಎನ್ನಿಸಿತು. ಅಪ್ಪು ಸರ್ ಕ್ಷಮೆ ಇರಲಿ. ಮೊದಲ ದಿನವೇ ಗಂಧದ ಗುಡಿಯಲ್ಲಿ ಭೇಟಿಯಾಗೋಣ’ ಎಂದು ಬರೆದಿದ್ದಾರೆ. ಇದನ್ನೂ ಓದಿ: ‘ಕಾಂತಾರ’ ಚಿತ್ರವನ್ನು ಡೈರೆಕ್ಟ್ ಆಗಿ ಆಸ್ಕರ್ ಗೆ ಕಳುಹಿಸಿ: ಕಂಗನಾ ರಣಾವತ್
ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಹಲವು ಅಚ್ಚರಿಗಳು ನಡೆದಿವೆ. ಪುನೀತ್ ರಾಜ್ ಕುಮಾರ್ (Puneeth Rajkumar) ಜೊತೆಗಿನ ಒಡನಾಟವನ್ನು ಅನೇಕ ಕಲಾವಿದರು ಮತ್ತು ತಂತ್ರಜ್ಞರ ನೆನಪಿಸಿಕೊಂಡರು. ಅಲ್ಲದೇ, ಪ್ರಕಾಶ್ ರೈ, ಯಶ್ ಸೇರಿದಂತೆ ಹಲವು ಕಲಾವಿದರು ಪುನೀತ್ ಅವರ ಜನಪರ ಕಾಳಜಿಯನ್ನು ಮುಂದುವರೆಸಿಕೊಂಡು ಹೋಗುವ ಕುರಿತು ಮಾತನಾಡಿದರು. ಪುನೀತ್ ಅವರ ಗಂಧದ ಗುಡಿ ಚಿತ್ರಕ್ಕೆ ತೆರಿಗೆ ವಿನಾಯತಿಯನ್ನು ಮುಖ್ಯಮಂತ್ರಿಗಳು ಘೋಷಿಸಿದರು.
ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ರಮ್ಯಾ ಸೇರಿದಂತೆ ಹಲವು ಕಲಾವಿದರು ನೃತ್ಯ ಮಾಡಿದರೆ, ಗುರುಕಿರಣ್, ವಿಜಯ ಪ್ರಕಾಶ್ ಅಪ್ಪು ಹಾಡುಗಳನ್ನು ಹೇಳಿದರು. ಗೊಂಬೆ ಹೇಳುತೈತಿ ಹಾಡುವಾಗ ಡಾ.ರಾಜ್ ಅವರ ಅಷ್ಟೂ ಕುಟುಂಬ ಭಾಗಿಯಾಗಿತ್ತು. ಹಾಡು ಕೇಳುತ್ತಲೇ ಪುನೀತ್ ಪತ್ನಿ ಅಶ್ವಿನಿ ಕಣ್ಣೀರು ಹಾಕಿದರು. ಇಡೀ ಕಾರ್ಯಕ್ರಮ ಈ ಕ್ಷಣ ಭಾವುಕ ಪ್ರಪಂಚಕ್ಕೆ ಕರೆದುಕೊಂಡು ಹೋಗಿತ್ತು.