ರಾಯಚೂರು: ಬೇಸಿಗೆ ಆರಂಭವಾದಾಗಿನಿಂದ ಜನ ನೀರಿಗಾಗಿ ಪರದಾಡುತ್ತಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಅಂತ ಆರೋಪಿಸಿ ರಾಯಚೂರು ಜಿಲ್ಲಾ ಪಂಚಾಯ್ತಿ ಸದಸ್ಯರು ಪ್ರತಿಭಟನೆ ಮಾಡಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆಯಬೇಕಿದ್ದ ಸಾಮಾನ್ಯ ಸಭೆಗೆ ಖಾಲಿ ಮಣ್ಣಿನ ಮಡಿಕೆ ಹಿಡಿದು ಹೋರಾಟ ಆರಂಭಿಸಿದ ಸದಸ್ಯರು ಸಭೆ ಬಹಿಷ್ಕರಿಸಿ ಕೆಳಗೆ ಕುಳಿತು ಪ್ರತಿಭಟಿಸಿದರು. ಕಾಟಾಚಾರಕ್ಕೆ ಸಭೆಗಳನ್ನು ನಡೆಸಲಾಗುತ್ತಿದೆ. ನಾವು ಗ್ರಾಮಗಳಿಗೆ ತೆರಳದಂತೆ ಜನ ಬಯ್ಯುತ್ತಿದ್ದಾರೆ, ಕೂಡಲೇ ನೀರು ಕೊಡಿ ಎಂದು ಆಗ್ರಹಿಸಿದರು.
ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಅಂತ ಆರೋಪಿಸಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆದಿಮನೆ ವೀರಲಕ್ಷ್ಮಿ, ಸಿಇಓ ಕೂರ್ಮಾರಾವ್ ವಿರುದ್ಧ ಘೋಷಣೆಗಳನ್ನ ಕೂಗಿದ್ರು. ಅಧ್ಯಕ್ಷರು ನಮ್ಮ ಜೊತೆ ಹೋರಾಟಕ್ಕಿಳಿದು ಅಧಿಕಾರಿಗಳ ಧೋರಣೆ ಖಂಡಿಸಬೇಕು ಎಂದು ಪ್ರತಿಭಟನಾ ಸದಸ್ಯರು ಅಗ್ರಹಿಸಿದರು.
ಬರಗಾಲ ನಿರ್ವಹಣೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಸಭೆಯಲ್ಲಿ ಕುಳಿತು ಚರ್ಚಿಸಿದರೆ ಬಗೆಹರಿಸಬಹುದು ಅಂತ ಜಿ.ಪಂ. ಕಾರ್ಯ ನಿರ್ವಾಹಕಾಧಿಕಾರಿ ಕೂರ್ಮರಾವ್ ಮನವೊಲಿಸುವ ಪ್ರಯತ್ನ ಮಾಡಿದರು. ಹಟ ಬಿಡದ ಸದಸ್ಯರು ಸಭಾ ತ್ಯಾಗಮಾಡಿ ಸಭೆಯಿಂದ ಹೊರನಡೆದರು.