ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಮಾಡುತ್ತಿದ್ದ ಕೆಲಸಕ್ಕೆ ನಾನು ಸಹ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ಇಂದು ಪುನೀತ್ ರಾಜ್ಕುಮಾರ್ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ಇಂದಿಗೆ 8 ದಿನಗಳಾಯಿತು. ಅವರ ಅಕಾಲಿಕ ನಿಧನದಿಂದ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ, ನಾಡಿಗೆ ತುಂಬಲಾರದ ನಷ್ಟವಾಗಿದೆ. ಅಪ್ಪು ಸಾಮಾಜಿಕ ಕಳಕಳಿಯ ಚಿತ್ರಗಳು ನಮಗೆ ಇಷ್ಟವಾಗಿವೆ. ಅಪ್ಪು ಸೇವೆ ಅಪಾರವಾದದ್ದು, ಹಳ್ಳಿ, ಹಳ್ಳಿಗಳಲ್ಲಿ ಗಲ್ಲಿ, ಗಲ್ಲಿಗಳಲ್ಲಿ ಅಭಿಮಾನಿಗಳು ಗೌರವ ಸಲ್ಲಿಸಿದ್ದಾರೆ ಎಂದರು. ಇದನ್ನೂ ಓದಿ: ಶಿರವಾಳ ಗ್ರಾಮದ ವೃತ್ತಕ್ಕೆ ಪುನೀತ್ ಹೆಸರು ನಾಮಕರಣ
ಮೈಸೂರಿನ ಶಕ್ತಿಧಾಮದಲ್ಲಿ ಸಾವಿರಾರು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಅದಕ್ಕೆ ನಾನು ನನ್ನ ಕೈಲಾದ ಸೇವೆ ಮಾಡಲು ಬಯಸುತ್ತೇನೆ. ಆ ಬಗ್ಗೆ ಅಪ್ಪು ಫ್ಯಾಮಿಲಿಯೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ನುಡಿದರು.
ಕೊರೊನಾ ಅವಧಿಯಲ್ಲಿ ನಾನು ರಸಮಂಜರಿ ಕಾರ್ಯಕ್ರಮಗಳನ್ನ ಮಾಡಿದ್ದೆ. ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಪುನೀತ್ ರಾಜ್ ಕುಮಾರ್ ಅವರನ್ನು ಕ್ಷೇತ್ರಕ್ಕೆ ಕರೆದೊಯ್ದು ಕಾರ್ಯಕ್ರಮ ನೀಡಬೇಕೆಂದು ಅಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಪ್ಪು ಸದಾ ನಮ್ಮ ಹೃದಯದಲ್ಲಿ ನಗುತ್ತಿರುತ್ತಾರೆ – ಪುನೀತ್ ನೆನೆದು ಬಿಕ್ಕಿ, ಬಿಕ್ಕಿ ಅತ್ತ ಸೂರ್ಯ