ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಹತ್ಯೆ ಪ್ರಕರಣದಲ್ಲಿ ಶನಿವಾರ ಬಿಡುಗಡೆಯಾದ 6 ಅಪರಾಧಿಗಳ ಪೈಕಿ ಒಬ್ಬರಾದ ಆರ್.ಪಿ. ರವಿಚಂದ್ರನ್ (RP Ravichandran) ಮಾತನಾಡಿ, ಉತ್ತರ ಭಾರತದ ಜನರು ನಮ್ಮನ್ನು ಭಯೋತ್ಪಾದಕರು ಅಥವಾ ಕೊಲೆಗಾರರು ಎಂದು ನೋಡುವ ಬದಲಿಗೆ ನಮ್ಮನ್ನು ಸಂತ್ರಸ್ತರು ಎಂದು ನೋಡಬೇಕು ಎಂದು ಮನವಿ ಮಾಡಿದರು.
ಮಧುರೈನ ಸೆಂಟ್ರಲ್ ಜೈಲ್ನಿಂದ ಬಿಡುಗಡೆಯಾದ ನಂತರ ಮಾತನಾಡಿ, ಯಾರು ಭಯೋತ್ಪಾದಕರು? ಯಾರು ಸ್ವಾತಂತ್ರ್ಯ ಹೋರಾಟಗಾರು ಎಂಬುದನ್ನು ಕಾಲವೇ ನಿರ್ಧರಿಸುತ್ತದೆ. ನಾವು ಭಯೋತ್ಪಾದಕರು ಎಂಬ ಆರೋಪವನ್ನು ಹೊತ್ತಿದ್ದರೂ ಈಗ ನಾವು ಮುಗ್ಧರಾಗಿ ಬಿಡುಗಡೆಯಾಗಿದ್ದೇವೆ. ನಾವು ಮುಗ್ಧರು ಎಂಬುದನ್ನು ಕಾಲವೇ ನಿರ್ಣಯಿಸಿದೆ ಎಂದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಅಪರಾಧಿಗಳಾದ ನಳಿನಿ (Nalini Sriharan) ಮತ್ತು ರವಿಚಂದ್ರನ್ ಅವರು ಅಗಸ್ಟ್ನಲ್ಲಿ ಬಿಡುಗಡೆಗೆ ಕೋರಿ ಸುಪ್ರೀಂ ಕೋರ್ಟ್ನ (Supreme Court) ಮೊರೆ ಹೋಗಿದ್ದರು. ನಾವು ಈಗಾಗಲೇ 30 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದೇವೆ. ರಾಜೀವ್ ಗಾಂಧಿಯ ಕೊಲೆಯ 7 ಅಪರಾಧಿಗಳ ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಲು ತಮಿಳುನಾಡು ಸರ್ಕಾರ 4 ವರ್ಷಗಳ ಹಿಂದೆಯೇ ಒಪ್ಪಿಕೊಂಡಿತ್ತು ಎಂದು ಅಪರಾಧಿಗಳಾದ ಎಸ್ ನಳಿನಿ ಮತ್ತು ಆರ್.ಪಿ. ರವಿಚಂದ್ರನ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.
ಅವಧಿಗೆ ಮೊದಲೇ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಕೋರಿ ರಾಜೀವ್ ಗಾಂಧಿ ಹಂತಕರು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಗೆ ತಮಿಳುನಾಡು ಸರ್ಕಾರ ಬೆಂಬಲ ನೀಡಿತ್ತು. ತಮ್ಮ ಸಹ ಅಪರಾಧಿ ಎಜಿ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಿದಂತೆ ತಮ್ಮನ್ನೂ ಬಿಡುಗಡೆ ಮಾಡುವಂತೆ ಕೋರಿ ನಳಿನಿ ಮತ್ತು ರವಿಚಂದ್ರನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ನೀಡಿ ಅವರನ್ನು ಬಿಡುಗಡೆ ಮಾಡಲು ಆದೇಶ ಹೊರಡಿಸಿತ್ತು. ಇದನ್ನೂ ಓದಿ: ಗಾಂಧಿ ಕುಟುಂಬಕ್ಕೆ ಕ್ಷಮೆ ಕೋರುವೆ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ
ದೇಶದಲ್ಲೇ ಅತಿ ಹೆಚ್ಚು ಕಾಲ ಜೀವಾವಧಿ ಶಿಕ್ಷೆ ಅನುಭವಿಸಿದ್ದ ಮಹಿಳಾ ಕೈದಿ ನಳಿನಿ ಶ್ರೀಹರನ್ ಅವರನ್ನು ಶನಿವಾರ ವೆಲ್ಲೂರು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಜೈಲಿನಿಂದ ಹೊರನಡೆದ ನಂತರ ನಳಿನಿ ಮಾತನಾಡಿ, 32 ವರ್ಷಗಳ ಕಾಲ ತಮ್ಮನ್ನು ಬೆಂಬಲಿಸಿದ ತಮಿಳುನಾಡಿನ ಜನರಿಗೆ ಧನ್ಯವಾದ ಅರ್ಪಿಸಿದರು. ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆ ಕೇಸ್ – 30 ವರ್ಷಗಳ ನಂತರ ನಳಿನಿ ಶ್ರೀಹರನ್ ಸೇರಿ 3 ಅಪರಾಧಿಗಳು ರಿಲೀಸ್