ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕನ್ನಡದ ಕೋಟ್ಯಧಿಪತಿ ನಡೆಸಲು ಕಾರಣವೇನು ಎಂಬುದರ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಇದೇ ಶನಿವಾರದಿಂದ ಮತ್ತೊಮ್ಮೆ ವೀಕೆಂಡ್ ಮಸ್ತಿಯನ್ನು ಹೆಚ್ಚಿಸಲು ಪುನೀತ್ ರಾಜ್ಕುಮಾರ್ ಕನ್ನಡದ ಕೋಟ್ಯಧಿಪತಿ ಶೋಗೆ ವಾಪಸ್ ಆಗಿದ್ದಾರೆ. ಕೋಟ್ಯಧಿಪತಿ ಶೋ ಈಗ ಮತ್ತೆ ಪುನೀತ್ ಅವರ ಕೈ ಸೇರಿದ್ದು, ಹೊಸ ಹುರುಪಿನೊಂದಿಗೆ ಕಾರ್ಯಕ್ರಮ ನಡೆಸಿಕೊಡಲು ಸಿದ್ಧರಾಗಿದ್ದಾರೆ. ಸಿದ್ಧಾರ್ಥ್ ಬಾಸಾ ನನಗೆ ಈ ಕಾರ್ಯಕ್ರಮಕ್ಕೆ ಸ್ಫೂರ್ತಿ ನೀಡಿದ್ದಾರೆ. ನಾನು ಚಿಕ್ಕವಯಸ್ಸಿನಲ್ಲಿ ಇದ್ದಾಗ ಅವರು ಕ್ವಿಝ್ ಮಾಡುತ್ತಿದ್ದರು. ಅವರನ್ನು ನೋಡಿ ನಾನು ಬೆಳೆದಿದ್ದೇನೆ. ನಾನು ಅವರ ದೊಡ್ಡ ಅಭಿಮಾನಿ ಎಂದು ಪುನೀತ್ ಹೇಳಿದ್ದಾರೆ.
ಅಮಿತಾಬ್ ಬಚ್ಚನ್ ರಂತಹ ದಿಗ್ಗಜ ನಟರು ನಡೆಸಿಕೊಟ್ಟ ಕಾರ್ಯಕ್ರಮವನ್ನು ನಾನು ಹೇಗೆ ಮಾಡೋದು ಎಂಬ ಭಯ ನನ್ನ ಕಾಡಿತ್ತು. ಆದರೆ ನನ್ನ ತಾಯಿ ನನಗೆ ಮೊದಲ ಧೈರ್ಯ ನೀಡಿದ್ದರು. ನಿನ್ನಿಂದ ಇದು ಸಾಧ್ಯ ಎಂದು ಮೊದಲು ನನ್ನ ತಾಯಿ ನನಗೆ ಹೇಳಿದರು. ಆ ನಂತರ ನನ್ನ ಸಹೋದರರಾದ ಶಿವಣ್ಣ ಹಾಗೂ ರಾಘಣ್ಣ ಕೂಡ ನನಗೆ ಧೈರ್ಯ ತುಂಬಿದರು. ಅಲ್ಲದೆ ರಾಘಣ್ಣ ಈ ಕಾರ್ಯಕ್ರಮದಲ್ಲೂ ನನ್ನ ಜೊತೆ ಇರ್ತಾರೆ ಎಂದು ಪುನೀತ್ ನೆನೆಪು ಮೆಲುಕು ಹಾಕಿದರು.
ಈ ಕಾರ್ಯಕ್ರಮದ ಬಗ್ಗೆ ತುಂಬಾ ಕ್ಯೂರೆಸ್ ಆಗಿರುವ ಪುನೀತ್, ಒಬ್ಬ ಆ್ಯಂಕರ್ ಆಗಿ ಯಾವ ಆ್ಯಂಕರ್ ಇಷ್ಟ ಎಂಬ ಮಾತನ್ನು ಹಂಚಿಕೊಂಡಿದ್ದಾರೆ. ರಮೇಶ್ ಅರವಿಂದ್, ಸುದೀಪ್, ಅಕುಲ್ ಬಾಲಾಜಿ, ಅನುಶ್ರೀ, ಸೃಜನ್ ಎಲ್ಲರೂ ಒಳ್ಳೆಯ ಆ್ಯಂಕರ್ ಗಳೇ ಆಗಿದ್ದಾರೆ. ನಾನು ಸುಮಾರು ಕಾರ್ಯಕ್ರಮಗಳನ್ನು ನೋಡುತ್ತೇನೆ. ಬಹಳಷ್ಟು ಆ್ಯಂಕರ್ ಕಾರ್ಯಕ್ರಮವನ್ನು ಚೆನ್ನಾಗಿ ನಡೆಸಿಕೊಳ್ಳುತ್ತಾರೆ ಎಂದು ಪುನೀತ್ ತಿಳಿಸಿದ್ದಾರೆ.