ಶಿವಮೊಗ್ಗ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನದಿಂದ ಅಭಿಮಾನಿಗಳು, ಕುಟುಂಬಸ್ಥರು, ಕಲಾವಿದರು ಸೇರಿದಂತೆ ಪ್ರತಿಯೋಬ್ಬರಿಗೂ ನೋವು ತರಿಸಿದೆ. ಪುನೀತ್ ಅವರು ಮರಣ ಹೊಂದಿದ ನಂತರ ಹಲವು ಮಂದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಆದರೆ ಶಿವಮೊಗ್ಗ ನಗರದ ಜನತೆ ಒಂದು ಹೆಜ್ಜೆ ಮುಂದೆ ಹೋಗಿ ಪುನೀತ್ ಮೇಲಿನ ಅಭಿಮಾನವನ್ನು ವಿಭಿನ್ನವಾಗಿ ಮೆರೆದಿದ್ದಾರೆ.
ನಗರದ ಹೃದಯ ಭಾಗದಲ್ಲಿರುವ ಲಕ್ಷ್ಮಿ ಚಿತ್ರಮಂದಿರದ ಬಳಿಯ ನಿವಾಸಿಗಳು, ಚಿತ್ರಮಂದಿರ ಇರುವ ಸುಮಾರು 1 ಕಿ.ಮೀ ಉದ್ದದ ಲಕ್ಷ್ಮೀ ಟಾಕೀಸ್ ಹತ್ತಿರದ ಚಾನೆಲ್ ರಸ್ತೆಗೆ ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ ಮಾಡಿದ್ದಾರೆ. ಆ ಮೂಲಕ ಸಾರ್ವಜನಿಕರು ತಮ್ಮ ಅಭಿಮಾನವನ್ನು ಎತ್ತಿ ಹಿಡಿದು ಸ್ಥಳೀಯ ಮಹನಾಗರ ಪಾಲಿಕೆಗೆ ಅಧಿಕೃತಗೊಳಿಸಲು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಅಪ್ಪು ಕೊನೆ ಕ್ಷಣದ ವಿಡಿಯೋ ಲಭ್ಯ
ಕನ್ನಡ ಸಾಂಸ್ಕೃತಿಕ ಲೋಕದ ರಾಯಭಾರಿ ಪುನೀತ್ ರಾಜಕುಮಾರ್ ನಾಡಿಗೆ ಕಲಾದೇವಿ ಸೇವಿಯನ್ನು ಬಾಲ್ಯದಿಂದಲೇ ನೀಡಿದವರು. ಅಲ್ಲದೇ ಅವರು ತಮ್ಮ ನಟನೆ ಹಾಗೂ ಸಹೃದಯಿತನದಿಂದ ಜನರ ಮನಸ್ಸಿನಲ್ಲಿ ನೆಲೆಯೂರಿ ಮಾದರಿಯಾಗಿದ್ದರು. ಅವರ ಅಗಲಿಕೆ ಅತೀವ ನೋವುಂಟು ಮಾಡಿದ್ದು, ಅವರ ಕಲಾ ಹಾಗೂ ಸಾಮಾಜಿಕ ಜೀವನ ನಿರ್ವಹಣೆ ಕೋಟಿ, ಕೋಟಿ ಕನ್ನಡಿಗರಿಗೆ ಮಾದರಿಯಾಗಿವೆ. ಇದನ್ನೂ ಓದಿ: ಪುನೀತ್ ಸಮಾಧಿಗೆ ಹಾಲು ತುಪ್ಪ ಕಾರ್ಯ ನೆರವೇರಿಸಿದ ಕುಟುಂಬಸ್ಥರು
ಶಿವಮೊಗ್ಗ ನಗರದಲ್ಲಿಯೂ ಸುಮಾರು ಒಂದು ಕಿ.ಮೀ ಉದ್ದದ ರಸ್ತೆಗೆ ಸಾರ್ವಜನಿಕರೇ ಖುದ್ದು ಸೇರಿ ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮ ಫಲಕವನ್ನು ಸ್ಥಾಪಿಸಿ ಉದ್ಘಾಟನೆ ನೆರವೇರಿಸಿರುವುದು ಶ್ಲಾಘನೀಯವಾಗಿದೆ.