– ದೇಶ ಬೆಳೆಯಬೇಕಾದ್ರೆ ವಿದ್ಯೆ, ವೈದ್ಯ, ವ್ಯವಸಾಯ ಮುಖ್ಯ
– ರೇವಾ ವಿಶ್ವವಿದ್ಯಾಲಯದ ಕುಲಪತಿ ಪಿ.ಶ್ಯಾಮರಾಜು ಕಿವಿಮಾತು
ಬೆಂಗಳೂರು: ಕಂಪ್ಯೂಟರ್ ಬಂದಾಗ ಎಲ್ಲರೂ ನಿರುದ್ಯೋಗ (Unemployment) ಸಮಸ್ಯೆ ಹೆಚ್ಚಾಗುತ್ತೆ. ಮನುಷ್ಯ ಮಾಡುವ ಕೆಲಸವನ್ನು ಕಂಪ್ಯೂಟರ್ಗಳೇ ಮಾಡಿಬಿಡುತ್ತವೆ ಅಂತಾ ಜನ ಆತಂಕಪಟ್ಟಿದರು. ಆದ್ರೆ ಕಂಪ್ಯೂಟರ್ ಬಂದಮೇಲೆಯೇ ಉದ್ಯೋಗಸೃಷ್ಟಿ ಜಾಸ್ತಿಯಾಗಿದೆ ಎಂದು ಕೇಬ್ರಿಂಡ್ಜ್ ಗ್ರೂಪ್ ಅಧ್ಯಕ್ಷ ಡಿ.ಕೆ ಮೋಹನ್ (DK Mohan) ತಿಳಿಸಿದರು.
Ad6 ಸಹಯೋಗದಲ್ಲಿ ‘ಇಂದಿನ ಕಲಿಕೆ, ನಾಳಿನ ದಾರಿದೀಪ’ ಎಂಬ ಘೋಷವಾಕ್ಯದೊಂದಿಗೆ ಪಬ್ಲಿಕ್ ಟಿವಿ (Public TV) ಆಯೋಜಿಸಿರುವ ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳ ’ವಿದ್ಯಾಪೀಠ’ (Vidhaya Peeta Education Expo) 6ನೇ ಆವೃತ್ತಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಾವುದೇ ವಿದ್ಯಾರ್ಥಿ ವೈಯಕ್ತಿಕವಾಗಿ 105 ವಿದ್ಯಾಸಂಸ್ಥೆಗಳಿಗೆ ಹೋಗಿ ಹೊಸ ಹೊಸ ಕೋರ್ಸ್ಗಳಿವೆ ಅಂತಾ ನೋಡೋದಕ್ಕೆ ಸಾಧ್ಯವಾಗಲ್ಲ. ಆದ್ರೆ ಇಲ್ಲಿ ಒಂದೇ ಸೂರಿನಡಿ ನೋಡುವಂತೆ ಮಾಡಲಾಗಿದೆ. ಎಲ್ಲರೂ ಇದರ ಪ್ರಯೋಜನ ಪಡೆದು ನಿಮ್ಮಿಷ್ಟದ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕೋರ್ಸ್ ಇಷ್ಟವಾಗುತ್ತೆ. ಪೋಷಕರು ಸಹ ತಮ್ಮ ಮಕ್ಕಳ ಆಸಕ್ತಿ, ಶಕ್ತಿ ನೋಡಿ, ಆಲೋಚಿಸಿ ಅವರಿಗೆ ಇಷ್ಟವಾಗುವ ಕೋರ್ಸ್ಗಳನ್ನ ಕೊಡಿಸಬೇಕು. ಆಗ ಮಾತ್ರ ವಿದ್ಯಾರ್ಥಿ ಸಂತೋಷದಿಂದ ಶಿಕ್ಷಣ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ನಾವು ಓದುತ್ತಿದ್ದಾಗ ಇಂತಹ ಅವಕಾಶಗಳು, ಕೋರ್ಸ್ ಆಯ್ಕೆಗಳು ಇರಲಿಲ್ಲ. ಈಗ ನಿಮ್ಮ ಪ್ರತಿಭೆ ತೋರಿಸಲು ಎಲ್ಲ ಅವಕಾಶಗಳು ಇವೆ. ಯಾವ ಕೋರ್ಸ್ಗಳು ಮೇಲು ಕೀಳೆಂಬುದಿಲ್ಲ. ಎಲ್ಲವೂ ಸಮಾನ. ಕಂಪ್ಯೂಟರ್ ಬಂದ್ಮೇಲೆ ನಿರುದ್ಯೋಗ ಸಮಸ್ಯೆ ಉಂಟಾಗುತ್ತೆ ಅಂತಾ ಹೇಳ್ತಿದ್ರು. ಆದ್ರೆ ಉದ್ಯೋಗ ಸೃಷ್ಟಿ ಜಾಸ್ತಿಯಾಗ್ತಿದೆ. ವಿಶ್ವದಾದ್ಯಂತ ತಾಂತ್ರಿಕತೆ ಬೆಳೆಯುತ್ತಿದ್ದು, ಅವಕಾಶಗಳೂ ಸೃಷ್ಟಿಯಾಗುತ್ತಿವೆ. ನೀವು ಬಯಸಿದ ವೃತ್ತಿ ಬೇಕು ಅಂದ್ರೆ ಕೌಶಲ ರೂಢಿಸಿಕೊಳ್ಳಬೇಕು. ಆಗ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತೆ ಎಂದು ತಿಳಿವಳಿಕೆ ನೀಡಿದರು.
ನಂತರ ರೇವಾ ವಿಶ್ವವಿದ್ಯಾಲಯದ ಕುಲಪತಿ ಪಿ.ಶ್ಯಾಮರಾಜು (P Shyama Raju) ಮಾತನಾಡಿ, ಯಾವುದೇ ದೇಶ ಬೆಳೆಯಬೇಕಾದ್ರೆ ವಿದ್ಯೆ, ವೈದ್ಯ, ವ್ಯವಸಾಯ ತುಂಬಾ ಮುಖ್ಯ. ಇದೀಗ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸಿದ್ರೆ ವಿಶ್ವಮಟ್ಟದಲ್ಲಿ ಒಪ್ಪುತ್ತದೆ ಎಂದರು.
105 ವಿದ್ಯಾಸಂಸ್ಥೆಗಳು ಒಂದೇ ಸೂರಿನಡಿ ಭಾಗವಹಿಸಿವೆ ಅಂದ್ರೆ ಅದು ರಂಗನಾಥ್ ಅವರಿಂದ ಮಾತ್ರ ಸಾಧ್ಯ. ಇಂತಹ ವೇದಿಕೆ ನಿಮಗೆ ಎಲ್ಲೂ ಸಿಗಲ್ಲ, ಎಲ್ಲರೂ ಉಪಯೋಗಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.