ಚಿಕ್ಕಬಳ್ಳಾಪುರ: ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕ ನೀರಿನ ಸಂಪಿಗೆ ಬಿದ್ದ ತನ್ನ ಸ್ನೇಹಿತೆಯನ್ನು ರಕ್ಷಿಸಿ ಪಬ್ಲಿಕ್ ಹೀರೋ ಆಗಿದ್ದ ನಾಲ್ಕೂವರೆ ವರ್ಷದ ಪುಟಾಣಿ ಪೋರ ರಾಜ್ಯಮಟ್ಟದ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಪಾತ್ರನಾಗಿದ್ದಾನೆ.
ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸಾತ್ವಿಕ್ 2018 ಜುಲೈ 25ರಂದು ನಿರ್ಮಾಣ ಹಂತದ ಮನೆಯೊಂದರ ಬಳಿ ಆಟವಾಡುತ್ತಿದ್ದ ವೇಳೆ ತೆರೆದ ಸಂಪಿಗೆ ತನ್ನ ಸ್ನೇಹಿತೆ ಪೂರ್ವಿಕಾ ಆಯತಪ್ಪಿ ಬಿದ್ದಿದ್ದಳು. ಈ ವೇಳೆ ಸಮಯಪ್ರಜ್ಞೆ, ಧೈರ್ಯ ಸಾಹಸ ಮೆರೆದಿದ್ದ ಬಾಲಕ ಸಾತ್ವಿಕ್ ಆಕೆಗೆ ಕೈ ನೀಡಿ ಮೇಲೆತ್ತಿ ಆಕೆಯ ಜೀವವನ್ನ ಉಳಿಸಿದ್ದನು.
ಈತನ ಸಾಧನೆ ಗುರುತಿಸಿರುವ ರಾಜ್ಯ ಸರ್ಕಾರ ಸದ್ಯ ಸಾತ್ವಿಕ್ಗೆ ಹೊಯ್ಸಳ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಭಾನುವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬಾಲಕನಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯವರಾದ ಶಿಶಿಕಲಾ ಜೊಲ್ಲೆಯವರು ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.
ಅಂದು ಘಟನೆ ನಡೆದ ದಿನ ಅಂಗನವಾಡಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾತ್ವಿಕ್ ಸದ್ಯ ಈಗ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.