ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ಮತ್ತೊಂದು ಕಡೆ ರಾಜ್ಯದ ಮೂರು ಪಕ್ಷದ ನಾಯಕರು ಪರಸ್ಪರ ಕೆಸರೆರೆಚಾಟ ಶುರುಮಾಡಿದ್ದಾರೆ.
ಪ್ರಕರಣ ಬೆಳಕಿಗೆ ಬಂದ ವೇಳೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣ ಸಂಬಂಧ ಆಡಿಯೋ ಬಿಡುಗಡೆ ಜೊತೆಗೆ ಒಂದು ಆರೋಪ ಮಾಡಿದ್ದರು. ಇದಾದ ನಂತರ ಸಿಐಡಿ ಪೊಲೀಸರು ಪ್ರಿಯಾಂಕ್ ಅವರಿಗೆ ನೋಟಿಸ್ ಕೂಡ ನೀಡಿದ್ದರು. ಈ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಕಿತ್ತಾಟಕ್ಕೂ ಕಾರಣವಾಗಿತ್ತು. ಇಂದು ಗೃಹ ಸಚಿವರಿಗೆ ಪತ್ರ ಬರೆದಿರುವ ಪ್ರಿಯಾಂಕ್, ಆರಗ ಜ್ಞಾನೇಂದ್ರ ಅವರಿಗೆ ಪತ್ರದ ಮೂಲಕ ಒಂದಷ್ಟು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮಠದ ಶ್ರೀಗಳಂತೆ ಮಾತನಾಡಿದ್ರು: ಸಿದ್ದು ಹೊಗಳಿದ ಡಿಕೆಶಿ
ಪತ್ರದಲ್ಲೇನಿದೆ?
ಪ್ರಕರಣ ಸಂಬಂಧ ಧ್ವನಿಯೆತ್ತಿದ ನನಗೆ ಈಗಾಗಲೇ ಮೂರು ಬಾರಿ ನೋಟಿಸ್ ನೀಡಿದ್ದೀರಿ. ಅದಕ್ಕೆ ನಾನು ಲಿಖಿತ ರೂಪದಲ್ಲಿ ಉತ್ತರ ಕೂಡ ನೀಡಿದ್ದೇನೆ. ಆದರೆ ಬಿಜೆಪಿ ನಾಯಕರಾದ ಸಚಿವ ಪ್ರಭು ಚೌಹಾಣ್, ಎಸ್.ವಿ.ಸಂಕನೂರ, ಶಶಿಲ್ ಜಿ ನವೊಶಿರವರು ಕೂಡ ಈ ಪ್ರಕರಣ ಸಂಬಂಧ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಹಲವಾರು ಬಿಜೆಪಿ ಮುಖಂಡರು ಕೂಡ ಈ ಬಗ್ಗೆ ಮಾತಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ತೊರೆದ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ
ನನಗೆ ನೋಟಿಸ್ ನೀಡಿ ಮಾಹಿತಿ ಕೋರಿದಂತೆ ಅವರಿಗೂ ನೋಟಿಸ್ ನೀಡಿ ಮಾಹಿತಿ ತೆಗೆದುಕೊಂಡಿದ್ದೀರಾ? ನೀವು ಕೂಡ ಅಕ್ರಮದ ಬಗ್ಗೆ ಕೆಲವೊಂದು ಗೊಂದಲದ ಹೇಳಿಕೆಗಳನ್ನು ನೀಡಿದ್ದೀರಿ. ನೀವು ಯಾವ ರೀತಿ ಸಿಐಡಿ ತನಿಖೆಗೆ ಸ್ಪಂದಿಸಿದ್ದೀರಿ? ನಿಮ್ಮ ಬಳಿ ಇರುವ ಮಾಹಿತಿಯನ್ನು ಸಿಐಡಿಗೆ ನೀಡುವಂತೆ ಪತ್ರದ ಮೂಲಕ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.