ಹಾಸನ: ಕೂಲಿ ಕೆಲಸಕ್ಕೆಂದು (Wage Work) ಕರೆದುಕೊಂಡು ಬಂದು ಕೂಡಿ ಹಾಕಿದ್ದ 18 ಮಂದಿ ಕಾರ್ಮಿಕರನ್ನು (Workers) ರಕ್ಷಿಸಿ ಆರೋಪಿಯನ್ನು ಬಂಧಿಸಿದ ಘಟನೆ ಹಾಸನದ (Hassan) ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಾಸನ ಜಿಲ್ಲೆ ಅರಸೀಕೆರೆ (Arasikere) ತಾಲೂಕಿನ ಬಾಣಾವರ ಹೋಬಳಿಯ ಚೆಲುವನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮುನೇಶ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ನಿರ್ಗತಿಕರಿಗೆ ಕೆಲಸ ಕೊಡಿಸುತ್ತೇನೆ ಎಂದು ಕರೆದುಕೊಂಡು ಬಂದು ಎಲ್ಲರನ್ನೂ ಒಂದೆಡೆ ಕೂಡಿ ಹಾಕಿದ್ದ. ಅಲ್ಲದೇ ಕಾರ್ಮಿಕರಿಗೆ ಸರಿಯಾಗಿ ವೇತನ ಮತ್ತು ಆಹಾರ ನೀಡದೆ ದುಡಿಸಿಕೊಳ್ಳುತ್ತಿದ್ದ. ಒಂದೇ ವಾಹನದಲ್ಲಿ ಕೆಲಸಕ್ಕೆಂದು ಕರೆದುಕೊಂಡು ಹೋಗಿ ಮತ್ತೆ ತನ್ನ ತೋಟದ ಮನೆಯಲ್ಲಿ ಕೂಡಿ ಹಾಕುತ್ತಿದ್ದ ಕಿರಾತಕನನ್ನು ಬಂಧಿಸುವಲ್ಲಿ (Arrest) ಪೊಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕಲುಷಿತ ನೀರು ಕುಡಿದು ಬಾಲಕ ಸಾವು ಪ್ರಕರಣ: ರಾಯಚೂರು ಜಿಪಂ ಸಿಇಓಗೆ ನೋಟಿಸ್
ರೈಲ್ವೆ, ಬಸ್ ನಿಲ್ದಾಣದಲ್ಲಿದ್ದ ನಿರ್ಗತಿಕರನ್ನು ಕರೆದುಕೊಂಡು ಬಂದು ಬಂಧಿಸಿಟ್ಟಿದ್ದು ಮಾತ್ರವಲ್ಲದೇ ಯಾರನ್ನೂ ಹೊರಗೆ ಬಿಡದೆ ದುಡಿಸಿಕೊಂಡು ಚಿತ್ರಹಿಂಸೆ ನೀಡುತ್ತಿದ್ದ. ಕಾರ್ಮಿಕರು ಸ್ನಾನ, ಬಟ್ಟೆ, ಆಹಾರವಿಲ್ಲದೇ ಪರದಾಡುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ 18 ಮಂದಿ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಆರೋಪಿ ಮುನೇಶ್ ಈ ಹಿಂದೆಯೂ ಇಂತಹದೇ ಕೃತ್ಯಗಳಲ್ಲಿ ಭಾಗಿಯಾಗಿದ್ದು, ನಾಲ್ಕನೇ ಬಾರಿಗೆ ಪೊಲೀಸರ ಅತಿಥಿಯಾಗಿದ್ದಾನೆ. ಇದನ್ನೂ ಓದಿ: ಮೊಬೈಲ್ ನೀರಿಗೆ ಬಿದ್ದಿದ್ದಕ್ಕೆ ಡ್ಯಾಂ ಖಾಲಿ ಮಾಡಿಸಿದ್ದ ಅಧಿಕಾರಿಗೆ ಬಿತ್ತು 53 ಸಾವಿರ ದಂಡ!