– ಚುನಾವಣೆ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆ ಎಂದ ಖರ್ಗೆ
– ಬರ ವರದಿ ಸಿದ್ಧ ಮಾಡಿ ಕೇಂದ್ರಕ್ಕೆ ಸಲ್ಲಿಸುತ್ತೇವೆ
ಬೆಂಗಳೂರು: ಚನ್ನಪಟ್ಟಣ ತಹಶೀಲ್ದಾರ್ ಮೇಲಿನ ಹಲ್ಲೆ ಪ್ರಕರಣ ರಾಜ್ಯದಲ್ಲಿ ಚರ್ಚೆಯಾಗಿರುವ ಬೆನ್ನಲ್ಲೇ, ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ತಹಶೀಲ್ದಾರ್ ಮೇಲಿನ ಹಲ್ಲೆ ಪ್ರಕರಣ ಈಗ ನನ್ನ ಗಮನಕ್ಕೆ ಬಂದಿದೆ. ಮೊದಲು ಸಂಪೂರ್ಣ ಮಾಹಿತಿ ತರಿಸಿಕೊಳ್ಳುತ್ತೇನೆ. ಪರಿಶೀಲನೆ ನಡೆಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು.
ಹುಣಸೂರು ಶಾಸಕ ಪತ್ನಿ ಕುರಿತು ಅವಹೇಳನ; ಕ್ರಮಕ್ಕೆ ಸಮಯ ಬೇಕು
ಹುಣಸೂರು ಶಾಸಕ ಹರೀಶ್ ಗೌಡ ಅವರ ಪತ್ನಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಾಮೆಂಟ್ ಮಾಡಿದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ದೂರು ಈಗಾಗಲೇ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಇತ್ತೀಚೆಗೆ ನಟಿಯ AI ವಿಡಿಯೋ ಪ್ರಕರಣವೂ ದಾಖಲಾಗಿತ್ತು. ಇಂತಹ ಪ್ರಕರಣಗಳ ತನಿಖೆಗೆ ಸ್ವಲ್ಪ ಸಮಯ ಬೇಕಾಗುತ್ತದೆ. ಯಾರೇ ಆಗಿರಲಿ, ಎಲ್ಲರಿಗೂ ಒಂದೇ ರೀತಿಯ ನ್ಯಾಯ ಸಿಗಲಿದೆ ಎಂದು ತಿಳಿಸಿದರು.
ಬರ ವರದಿ ಸಿದ್ಧ ಮಾಡಿ ಕೇಂದ್ರಕ್ಕೆ ಸಲ್ಲಿಸುತ್ತೇವೆ
ಬರ ಪರಿಸ್ಥಿತಿ ಕುರಿತು ಮಾತನಾಡಿ, ಸಂಪೂರ್ಣ ವಿವರಗಳ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗುವುದು. ಸಿಎಂ ಈಗಾಗಲೇ ಸೂಚನೆ ನೀಡಿದ್ದಾರೆ. NDRF ಮಾನದಂಡದ ಪ್ರಕಾರ ವರದಿ ಸಿದ್ಧವಾಗಬೇಕು. ಇದಕ್ಕಾಗಿ ಜಿಲ್ಲೆಗಳಿಂದ ಗ್ರೌಂಡ್ ರಿಪೋರ್ಟ್ ತರಿಸಿಕೊಳ್ಳಲಾಗುತ್ತಿದೆ. ಬಿತ್ತನೆ, ಮೇವು, ನೀರು ಸೇರಿದಂತೆ ಎಲ್ಲ ಮಾಹಿತಿಯನ್ನು ಸೇರಿಸಿ ವರದಿ ಸಿದ್ಧಪಡಿಸಲಾಗುತ್ತದೆ. ನಂತರ ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ. ಬಳಿಕ ಕೇಂದ್ರದ ತಂಡ ಭೇಟಿ ನೀಡಿ ಬರ ಘೋಷಣೆ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.
ಹರಿಪ್ರಸಾದ್ ಅವರು 10 ಸಾವಿರ ಕೋಟಿ ರೂ. ಪರಿಹಾರದ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ ಮೊದಲು ಸಮಗ್ರ ವರದಿ ಸಿದ್ಧವಾಗಬೇಕು. ಆ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ:
ಚುನಾವಣೆ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆ
ಕೇಂದ್ರ ಚುನಾವಣಾ ಆಯೋಗಕ್ಕೆ ವಿಪಕ್ಷಗಳು ದೂರು ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿಪಕ್ಷಗಳಿಗಿಂತ ಮೊದಲೇ ನಾನು SIR ವಿಚಾರವಾಗಿ ಚುನಾವಣಾ ಆಯೋಗದ ಬಳಿ ಸಮಯ ಕೇಳಿದ್ದೆ. ಆದರೆ ಅವರು ಅವಕಾಶ ನೀಡಲಿಲ್ಲ. ನಾವು ಅಧಿಕೃತವಾಗಿ ಕೇಳಿದ ಪ್ರಶ್ನೆಗಳಿಗೂ ಉತ್ತರ ಬಂದಿಲ್ಲ ಎಂದು ಹೇಳಿದರು.
ಈಗ ಬಿಜೆಪಿ-ಜೆಡಿಎಸ್ ದೂರು ನೀಡಿದ ನಂತರ ಆಯೋಗ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ನೋಡೋಣ. ರಾಜ್ಯ ಸರ್ಕಾರ ಕೇಳಿದ ಪ್ರಶ್ನೆಗಳಿಗೆ ಸ್ಪಂದಿಸದ ಆಯೋಗ, ಈಗ ಏನು ಮಾಡುತ್ತದೆ ಎಂಬುದು ಗೊತ್ತಾಗಲಿದೆ. ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿ.ಟಿ. ರವಿ ಮೊದಲು ವಾಯ್ಸ್ ಸ್ಯಾಂಪಲ್ ಕೊಟ್ಟು ಆಮೇಲೆ ಮಾತನಾಡಲಿ: ಪ್ರಿಯಾಂಕ್ ತಿರುಗೇಟು
ಇದು ಬಿಜೆಪಿಯ SOP. ಮೊದಲು ಪ್ರತಿಭಟನೆ ಮಾಡುತ್ತಾರೆ, ನಂತರ ಮತದಾರರ ಹೆಸರುಗಳನ್ನು ಅಳಿಸುವ ಕೆಲಸ ಮಾಡುತ್ತಾರೆ. ರಾಜ್ಯ ಸರ್ಕಾರ ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸುವವರು ಅದಕ್ಕೆ ಸಾಕ್ಷಿ ನೀಡಲಿ. ನಾವು ಮತದಾರರ ಹಕ್ಕು ಉಳಿಸಲು ಪ್ರಶ್ನೆ ಕೇಳಿದ್ದೇವೆ. ಈಗ ಅವರ ದೂರಿಗೆ ಆಯೋಗ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ನೋಡೋಣ ಎಂದು ಹೇಳಿದರು.ಇದನ್ನೂ ಓದಿ: ಉಗ್ರ ಸಂಘಟನೆಗಳ ಜೊತೆ ನಂಟು – ಬಳ್ಳಾರಿಯ ಅಬ್ದುಲ್ ಸಲಾಮ್ ಮನೆ ಮೇಲೆ ಎನ್ಐಎ ದಾಳಿ
