ಬೆಂಗಳೂರು/ಮೈಸೂರು: ಚುನಾವಣೆಯಲ್ಲಿ ಅಚ್ಚರಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಬಿಜೆಪಿ ಹೈಕಮಾಂಡ್ (BJP High Command) ಮೈಸೂರಿನಲ್ಲಿ (Mysuru) ಈ ಬಾರಿ ಯದುವೀರ್ ಒಡೆಯರ್ (Yaduveer Wadiyar) ಅವರನ್ನು ಕಣಕ್ಕೆ ಇಳಿಸಲು ಚಿಂತನೆ ನಡೆಸಿದೆ.
ಹೌದು. ಹಾಲಿ ಸಂಸದರಾಗಿರುವ ಪ್ರತಾಪ್ ಸಿಂಹ (Pratap Simha) ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದ್ದು ಅವರ ಜಾಗದಲ್ಲಿ ಮೈಸೂರಿನ ರಾಜವಂಶಸ್ಥರ ಕುಡಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ.
ಕಳೆದ ಕೆಲ ದಿನಗಳಿಂದ ಯದುವೀರ್ ಒಡೆಯರ್ ಹೆಸರು ಕೇಳಿ ಬರುತ್ತಿದ್ದರೂ ಅದು ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆಗಿರಲಿಲ್ಲ. ಆದರೆ ಈಗ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಯದುವೀರ್ ಒಡೆಯರ್ ಹೆಸರು ಪ್ರಸ್ತಾಪವಾಗಿದೆ. ಇದನ್ನೂ ಓದಿ: ರಣಬಿಸಿಲ ನಡುವೆ ದಾಖಲೆಯ ವಿದ್ಯುತ್ ಬಳಕೆ – ಲೋಡ್ ಶೆಡ್ಡಿಂಗ್ ಭೀತಿ
ಈಗಾಗಲೇ ಯದುವೀರ್ ಒಡೆಯರ್ ಅವರನ್ನು ಬಿಜೆಪಿ ಸಂಪರ್ಕಿಸಿದ್ದು ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಪ್ರಮೋದಾ ದೇವಿ (Pramoda Devi) ಗ್ರೀನ್ ಸಿಗ್ನಲ್ಗೆ ನಾಯಕರು ಕಾಯುತ್ತಿದ್ದಾರೆ. ಒಂದು ವೇಳೆ ಪ್ರಮೋದಾ ದೇವಿ ಒಪ್ಪಿಗೆ ನೀಡಿದರೆ ಯದುವೀರ್ ಒಡೆಯರ್ ರಾಜಕಿಯ ಪ್ರವೇಶಿಸಲಿದ್ದಾರೆ.
ಯಡಿಯೂರಪ್ಪ (Yediyurappa) ಮತ್ತು ಆರ್ಎಸ್ಎಸ್ ನಾಯಕರೊಬ್ಬರ ಮೂಲಕ ಯದುವೀರ್ ಅವರನ್ನು ಮನವೊಲಿಕೆ ಮಾಡಲಾಗಿದೆ. ಮನವೊಲಿಕೆಯ ಬೆನ್ನಲ್ಲೇ ಪ್ರತಾಪ್ ಸಿಂಹ ಜೊತೆ ಯದುವೀರ್ ಒಡೆಯರ್ ಹೆಸರನ್ನು ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲೇ ಶಿಫಾರಸ್ಸು ಮಾಡಲಾಗಿತ್ತು.
ಯದುವೀರ್ ಯಾಕೆ?
ಮೈಸೂರಿನ ಕೊನೆಯ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರ ಏಕೈಕ ಪುತ್ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಾಲ್ಕು ಬಾರಿ ಮೈಸೂರಿನ ಸಂಸದರಾಗಿದ್ದರಾಗಿ ಆಯ್ಕೆ ಅಗಿದ್ದರು. ಕಾಂಗ್ರೆಸ್ಸಿನಿಂದ ನಾಲ್ಕು ಬಾರಿ ಗೆದ್ದು ಎರಡು ಬಾರಿ ಅವರು ಸೋತಿದ್ದರು. 1984 ,1989, 1996, 1999ರಲ್ಲಿ ಗೆದ್ದಿದ್ದರೆ 1991 ಹಾಗೂ 2004ರಲ್ಲಿ ಸೋಲು ಅನುಭವಿಸಿದ್ದರು.
ಹಳೆ ಮೈಸೂರು ಭಾಗದಲ್ಲಿ ಮೈಸೂರು ರಾಜವಂಶಸ್ಥರ ಬಗ್ಗೆ ಈಗಲೂ ಜನರಲ್ಲಿ ಗೌರವವಿದೆ. ಮೈಸೂರಿನಲ್ಲಿ ಶಿಕ್ಷಣ,ನೀರಾವರಿ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳಿಗೆ ರಾಜರು ಭಾರೀ ಕೊಡುಗೆ ನೀಡಿದ್ದಾರೆ. ಈ ಸಮಾಜಮುಖಿ ಕೆಲಸದಿಂದ ಈಗಲೂ ರಾಜರ ಫೋಟೋವನ್ನು ಇಟ್ಟು ಪೂಜೆ ಮಾಡುವವರಿದ್ದಾರೆ. ಈ ಕಾರಣಕ್ಕೆ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡಿದರೆ ಹಳೆ ಮೈಸೂರು ಭಾಗ ಸೇರಿದಂತೆ ರಾಜ್ಯದಲ್ಲೂ ಪ್ರಭಾವ ಬೀರಬಹುದು ಎಂಬ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ.
ಪ್ರತಾಪ್ ಸಿಂಹ ಭವಿಷ್ಯ ಏನು?
ಸತತ ಎರಡು ಬಾರಿ ಸಂಸದರಾಗಿ ಆಯ್ಕೆ ಆಗಿರುವ ಪ್ರತಾಪ್ ಸಿಂಹ ಮೂರನೇ ಬಾರಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ರಾಜ್ಯದ ಹಲವು ಬಿಜೆಪಿ ಸಂಸದರು ತಮ್ಮ ಸಾಧನೆ ಕೈಪಿಡಿ ಹೊರತರದೇ ಇದ್ದರೂ ಪ್ರತಾಪ್ ಸಿಂಹ ಬಿಜೆಪಿಯ ಅಗ್ರ ನಾಯಕರಿಗೆ ತಮ್ಮ ಕೆಲಸದ ಸಾಧನೆಯ ಕೈಪಿಡಿಯನ್ನು ನೀಡಿದ್ದಾರೆ.
ಒಂದು ವೇಳೆ ಲೋಕಸಭೆ ಟಿಕೆಟ್ ಸಿಗದೇ ಇದ್ದರೆ ಪ್ರತಾಪ್ ಸಿಂಹ ಅವರ ಮುಂದಿನ ರಾಜಕೀಯ ಭವಿಷ್ಯ ಏನು ಎಂಬ ಪ್ರಶ್ನೆ ಬರುತ್ತದೆ. ಇನ್ನೂ ಮೈಸೂರು ಟಿಕೆಟ್ ಯಾರಿಗೆ ಸಿಗಲಿದೆ ಎನ್ನುವುದು ಅಂತಿಮವಾಗಿಲ್ಲ. ಯದುವೀರ್ ಒಡೆಯರ್ ಸ್ಪರ್ಧಿಸಿದರೆ ಪ್ರತಾಪ್ ಸಿಂಹಗೆ ಟಿಕೆಟ್ ಸಿಗುವುದು ಅನುಮಾನ. ಹೀಗಾಗಿ ಬೇರೆ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಕ್ಕರೂ ಸಿಗಬಹುದು ಎಂಬ ಮಾತು ಕೇಳಿ ಬಂದಿದೆ.
ಮೊದಲ ಬಾರಿ ಸ್ಪರ್ಧೆ ಮಾಡಿದ್ದ 2014ರ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 31,608 ಮತಗಳಿಂದ ಗೆದ್ದರೆ, 2019ರ ಚುನಾವಣೆಯಲ್ಲಿ 1,38,647 ಮತಗಳ ಅಂತರದಿಂದ ಮೈತ್ರಿ ಅಭ್ಯರ್ಥಿಯನ್ನು ಸೋಲಿಸಿದ್ದರು. ಸದ್ಯ ಪ್ರತಾಪ್ ಸಿಂಹ ರಾಜಕೀಯ ಭವಿಷ್ಯ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕೈಯಲ್ಲಿದೆ.