-ಕಣ್ಣೀರಿನಿಂದ ಅನುಕಂಪ ಗಿಟ್ಟಲ್ಲ
ಬೆಂಗಳೂರು: ಕಾಂಗ್ರೆಸ್ ನಾಯಕರ ಆರೋಪಗಳೆಲ್ಲ ಸುಳ್ಳು. ನ್ಯಾಯಾಲಯ ಎಂದೂ ತಪ್ಪು ಮಾಡಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ‘ಕೈ’ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವರು, ಡಿ.ಕೆ.ಶಿವಕುಮಾರ್ ಮತ್ತು ಚಿದಂಬರಂ ಅವರ ಬಂಧನಕ್ಕೆ ಬಿಜೆಪಿ ಕಾರಣ ಎಂಬ ಕಾಂಗ್ರೆಸ್ ಆರೋಪ ಸುಳ್ಳು. ಇಬ್ಬರ ಪರವಾಗಿ ಮಂಡಿಸಿದ್ದ ವಾದಗಳನ್ನು ನ್ಯಾಯಾಲಯ ಮಾನ್ಯ ಮಾಡಿಲ್ಲ. ಅವರು ಮಂಡಿಸಿದ್ದ ವಾದಗಳಲ್ಲಿ ಒಂದಾದರೂ ಅಂಶ ಸತ್ಯವಾಗಿದ್ದರೆ ನ್ಯಾಯಾಲಯ ಒಪ್ಪಿಕೊಳ್ಳುತ್ತಿತ್ತು. ಇಬ್ಬರು ತಪ್ಪು ಮಾಡಿಲ್ಲ ಅಂದ್ರೆ ಇಂದು ನ್ಯಾಯಾಂಗ ಮತ್ತು ಇಡಿ ಬಂಧನದಲ್ಲಿ ಇರುತ್ತಿರಲಿಲ್ಲ. ತಮ್ಮ ತಪ್ಪು ಮತ್ತು ಅಪರಾಧಗಳಿಂದಾಗಿ ಬಂಧನದಲ್ಲಿದ್ದಾರೆ ಎಂದು ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದರು.
ಇಬ್ಬರ ಬಂಧನಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಡಿ.ಕೆ.ಶಿವಕುಮಾರ್ ಮತ್ತು ಚಿದಂಬರಂ ಏನೆಲ್ಲ ಮಾಡಿದ್ದಾರೆ ಎಂಬ ವಿಷಯ ಜನತೆಗೆ ಗೊತ್ತಿದೆ. ಜೈಲಿಗೆ ಹೋದರೆ ಅನುಕಂಪ ಸಿಗುತ್ತೆ ಎಂದು ಈ ರೀತಿ ಮಾಡುತ್ತಿದ್ದಾರೆ. ಜೈಲಿನಿಂದ ಹೊರ ಬಂದರೆ ಅನುಕಂಪ ಸಿಗಲಿದೆ ಎಂಬುವುದು ಸುಳ್ಳು ಎಂದು ಪ್ರಹ್ಲಾದ್ ಜೋಶಿ ಕಿಡಿಕಾರಿದರು.
ಸಸಿಕಾಂತ್ ಸೆಂಥಿಲ್ ವಿಷಯವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಜಿಲ್ಲಾಧಿಕಾರಿಗಳು ಯಾವ ವಿಷಯಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವಿಚಾರ ನನಗೆ ಗೊತ್ತಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ಇರೋದರಿಂದ ಸೆಂಥಿಲ್ ಅವರು ಐಎಎಸ್ ಅಧಿಕಾರಿಯಾಗಿದ್ದಾರೆ. ತಪ್ಪುಗಳನ್ನು ಸರಿಪಡಿಸುವ ಬದಲಾಗಿ ಓಡಿ ಹೋದರೆ ಪರಿಹಾರ ಸಿಗಲ್ಲ ಎಂದರು.