ಚಾಮರಾಜನಗರ: ಪೋಸ್ಟ್ ಮ್ಯಾನ್ವೊಬ್ಬರು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಎಟಿಎಂ ಕಾರ್ಡ್ ಸೇರಿದಂತೆ ಮೊದಲಾದ ದಾಖಲೆಗಳನ್ನು ಜನರಿಗೆ ವಿತರಿಸದೇ ಮಣ್ಣಿನಲ್ಲಿ ಹೂತಿಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ಲೊಕ್ಕನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಹೌದು, ಲೊಕ್ಕನಹಳ್ಳಿ ಗ್ರಾಮದ ಪೋಸ್ಟ್ ಮ್ಯಾನ್ ನಾಗರಾಜು ಎಂಬವರು ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಮೊದಲಾದ ದಾಖಲೆಗಳನ್ನು ಜನರಿಗೆ ವಿತರಿಸುವ ಬದಲು ಮಣ್ಣಿನಲ್ಲಿ ಹೂತಿಟ್ಟಿದ್ದಾರೆ. ಇಲ್ಲಿಯ ಗ್ರಾಮಗಳಿಗೆ ತುಂಬಾ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಬರುವುದರಿಂದ ತಾನು ಒಬ್ಬನೇ ಇರೋದ್ರಿಂದ ಹಂಚಲಿಕ್ಕೆ ಆಗುವುದಿಲ್ಲ ಎಂದು ತಿಳಿದು ಮಣ್ಣಲ್ಲಿ ಹೂತಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
2013 ರಿಂದ ಲೊಕ್ಕಳ್ಳಿ, ಕೌಳ್ಳಿಹಳ್ಳಿ ಡ್ಯಾಂ, ಬೋರೇದೊಡ್ಡಿ, ಜಡೇಸ್ವಾಮಿದೊಡ್ಡಿ, ಸೇಬಿನ ಕೂಬೆ ಗ್ರಾಮಗಳ ಜನರಿಗೆ ಬಂದಿದ್ದ ದಾಖಲೆಗಳನ್ನು ಅಂಚೆ ಕಚೇರಿಯ ಮುಂಭಾಗದ ಖಾಲಿ ನಿವೇಶನದಲ್ಲಿ ಹೂತಿಟ್ಟಿದ್ದರು.
ಇದೀಗ ಖಾಲಿ ನಿವೇಶನದಲ್ಲಿ ಮನೆ ಕಟ್ಟಲು ಪಾಯ ತೆಗೆಯುವ ಸಂದರ್ಭದಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಎಟಿಎಂ ಕಾರ್ಡ್ ಸೇರಿದಂತೆ ಮೊದಲಾದ ದಾಖಲೆಗಳು ಪತ್ತೆಯಾಗಿವೆ. ಹೀಗಾಗಿ ಅಲ್ಲಿಯ ಗ್ರಾಮಸ್ಥರು ನಂಜನಗೂಡಿನ ಅಂಚೆ ವಿಭಾಗದ ಅಧೀಕ್ಷರಿಗೆ ದೂರು ನೀಡಿದ್ದಾರೆ. ಅಧೀಕ್ಷಕರು ಆ ಪೋಸ್ಟ್ ಮ್ಯಾನ್ ಮೇಲೆ ಸೂಕ್ತ ಕ್ರಮ ತಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.