ಬೆಂಗಳೂರು: ಐಷಾರಾಮಿ ಜೀವನ ನಡೆಸಲು ಬುಲೆಟ್ ಬೈಕ್ ಹಾಗೂ ಕಾರುಗಳನ್ನು ಕದಿಯುತ್ತಿದ್ದ 5 ಜನ ಕಳ್ಳರನ್ನು ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.
ನಂದನ್ ಕುಮಾರ್, ಸತೀಶ್ ಕುಮಾರ್, ಅಭಿಷೇಕ್, ಅನಿಲ್ ಹಾಗೂ ಪ್ರಕಾಶ್ ಬಂಧಿತ ಆರೋಪಿಗಳು. ಇವರ ವಿರುದ್ಧ ಚಿಕ್ಕಮಗಳೂರಿನ ಆಲ್ದೂರು, ಬೆಂಗಳೂರಿನ ರಾಜರಾಜೇಶ್ವರಿ ನಗರ, ಕಾಡುಗೋಡಿ, ಅವಲಹಳ್ಳಿ, ಪರಪ್ಪನ ಅಗ್ರಹಾರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.
ಬಂಧಿತರಿಂದ 7 ದುಬಾರಿ ಬೆಲೆಯ ಬುಲೆಟ್ ಬೈಕ್ಗಳು, ಒಂದು ಕಾರು ಸೇರಿದಂತೆ 60 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದ್ದು, ಇವುಗಳ ಒಟ್ಟು ಮೌಲ್ಯ 20 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಎಸ್.ಪಿ. ಶಶಿಕುಮಾರ್ ಬಂಧಿತರಿಂದ ವಶಪಡಿಸಿಕೊಂಡಿದ್ದ ವಸ್ತುಗಳನ್ನು ಮಾಲೀಕರಿಗೆ ಹಿಂದಿರುಗಿಸಿದರು. ಚಿನ್ನಾಭರಣ ಕಳೆದುಕೊಂಡಿದ್ದ ಲಲಿತಾ ಎಂಬವರು, ಕಳುವಾಗಿದ್ದ ಆಭರಣಗಳು ಸಿಗುತ್ತವೆ ಎನ್ನುವ ನಂಬಿಕೆ ನನಗೆ ಇರಲಿಲ್ಲ. ಕಳ್ಳರನ್ನು ಹಿಡಿದು ಆಭರಣವನ್ನು ಮತ್ತೆ ದೊರಕಿಸಿಕೊಟ್ಟ ಪೊಲೀಸರಿಗೆ ಧನ್ಯವಾದ ಎಂದರು.